ADVERTISEMENT

‘ನಾಡಿನ ಸದೃಢತೆಗೆ ಮದ್ಯಪಾನ ಮಾರಕ’

ಮದ್ಯಪಾನ, ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 13:18 IST
Last Updated 15 ಫೆಬ್ರುವರಿ 2017, 13:18 IST

ಶಿಗ್ಗಾವಿ: ‘ನಾಡಿನ ಸುಭದ್ರತೆ, ಸದೃಢತೆಗೆ ಮದ್ಯಪಾನ, ಮಾದಕ ವಸ್ತುಗಳು ಮಾರಕವಾಗಿದ್ದು, ವಿದ್ಯಾರ್ಥಿಗಳು ಜಾಗೃತಗೊಂಡು ಅವುಗಳಿಂದ ದೂರ ಉಳಿಯಬೇಕು’ ಎಂದು ಮದ್ಯಪಾನ ಸಂಯಮ ಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಸಿ.ರುದ್ರಪ್ಪ ಹೇಳಿದರು.

ಪಟ್ಟಣದ ರಂಭಾಪುರಿ ಕಾಲೇಜಿನ ಆವರಣದಲ್ಲಿ ಮಂಗಳವಾರ ಮದ್ಯಪಾನ ಸಂಯಮ ಮಂಡಳಿ ರಾಜ್ಯ ಘಟಕದ ಸಹಯೋಗದಲ್ಲಿ ನಡೆದ ಮದ್ಯಪಾನ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮ ಎಂಬ ವಿಚಾರ ಸಂಕಿರಣ ವನ್ನು ಸಸಿಗಳಿಗೆ ನೀರು ಹಾಕುವ ಮೂಲಕ  ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳೇ ನಾಡಿನ ಆಸ್ತಿ. ಅವರಿಗೆ ಸಮಾಜದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇದೆ. ಹೀಗಾಗಿ ಓದು–ಬರಹದ ಜೊತೆಗೆ ಸಮಾಜದ ಭವಿಷ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳು ವುದು ಸಹ ಪ್ರಮುಖವಾಗಿದೆ. ಕಳೆದು ಕೊಂಡ ಆಸ್ತಿ, ಅಂತಸ್ತುಗಳನ್ನು ಮತ್ತೆ ಪಡೆಯಬಹುದು. ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟ’ ಎಂದು ಅಭಿಪ್ರಾಯಪಟ್ಟರು.

ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ಪ್ರೊ.ನಾಗರಾಜ ದ್ಯಾಮನಕೊಪ್ಪ ಉಪನ್ಯಾಸ ನೀಡಿ, ‘ಕುಡಿತದ ದುಷ್ಚಟಗಳಿಂದ ಸಮಾಜದಲ್ಲಿ ಸಂಘರ್ಷ ಕ್ಕೆ ದಾರಿ ಮಾಡುತ್ತದೆ. ಹೀಗಾಗಿ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಂದಿರ  ಪಾತ್ರ ಪ್ರಮುಖವಾಗಿದೆ. ಮಕ್ಕಳ ಬಗ್ಗೆ ನಿರ್ಲಕ್ಷತೆ, ಮಾರ್ಗದರ್ಶದ ಕೊರತೆ ಯಿಂದ ದುಷ್ಚಟಗಳು ಅಂಟಿಕೊಳ್ಳುತ್ತಿ ದ್ದಾರೆ’ ಎಂದು ವಿಷಾದಿಸಿದರು.

ಮದ್ಯಪಾನ ಸಂಯಮ ಮಂಡಳಿ ತಾಲ್ಲೂಕು ಘಟಕದ ಅಧ್ಯಕ್ಷ ಎಫ್‌.ಸಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಮ್ತಾಜಭಿ ತಡಸ, ಸದಸ್ಯರಾದ ಬಸನಗೌಡ ದೇಸಾಯಿ, ದೀಪಾ ಅತ್ತಿಗೇರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಆರೇರ್‌, ಸದಸ್ಯರಾದ  ತಾರಾಮತಿ ಧರೆಣ್ಣವರ, ಶ್ರೀಕಾಂತ ಪೂಜಾರ, ಎಪಿಎಂಸಿ ಸದಸ್ಯರಾದ ಹನುಮರೆಡ್ಡಿ ನಡುವಿನಮನಿ, ಪ್ರೇಮಾ ಪಾಟೀಲ, ಡಾ.ಪ್ರಭುದೇವ ಬಣಕಾರ, ಡಾ.ಬಿ.ಎಚ್‌.ವೀರಣ್ಣ, ಬಸನಗೌಡ್ರ ದುಂಡಿಗೌಡ್ರ, ಚಂದ್ರಣ್ಣ ನಡುವಿನಮನಿ, ಗುಡ್ಡಪ್ಪ ಜಲದಿ, ಶಿವನಗೌಡ ಪಾಟೀಲ, ಶಂಭಣ್ಣ ಕಡಕೋಳ, ಪ್ರಾಚಾರ್ಯ ತಾವರಗುಂದಿ ಮತ್ತಿತರರು ಇದ್ದರು.

ಶ್ರೀಕಾಂತ ಪೂಜಾರ ಸ್ವಾಗತಿಸಿದರು. ಎಂ.ಬಿ.ಹಳೆಮನಿ ನಿರೂಪಿಸಿದರು

* ಕುಡಿತದಿಂದ ಅಪರಾಧ ಪ್ರವೃತ್ತಿ ಹೆಚ್ಚುತ್ತಿದೆ. ಇದು ಕೌಟುಂಬಿಕ ಸಮಸ್ಯೆಯಾಗಿದ್ದು, ಸಾಂಘೀಕ ಪ್ರಯತ್ನದಿಂದ ಪರಿಹಾರ ಕಾಣಬಹುದು
ಎಚ್‌.ಸಿ.ರುದ್ರಪ್ಪ, ಮದ್ಯಪಾನ ಸಂಯಮ ಮಂಡಳಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT