ರಾಣೆಬೆನ್ನೂರು: ಆರ್ಥಿಕ ನೀತಿ ನಿಯಮಗಳನ್ನು ನಿರ್ವಹಿಸುವ, ಕರೆನ್ಸಿಗಳನ್ನು ಮುದ್ರಿಸುವ, ಚಲಾವಣೆಗೆ ತರುವ ಹಾಗೂ ಅಮಾನ್ಯಗೊಳಿಸಬೇಕಾದ ಆರ್ಬಿಐ ಬದಲು ಇತ್ತೀಚೆಗೆ ದೇಶದಲ್ಲಿ ಆದ ನೋಟು ರದ್ದತಿ ಘೋಷಣೆಯು ಒಬ್ಬ ವ್ಯಕ್ತಿ ಕೇಂದ್ರಿಕೃತ ಹಾಗೂ ಪಕ್ಷದ ಸ್ವಾರ್ಥಕ್ಕೆ ಬಳಸಿಕೊಂಡಿರುವುದು ವಿಪರ್ಯಾಸ ಎಂದು ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ವಾಣಿಜ್ಯ ಹಾಗೂ ನಿರ್ವಹಣಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಭಾಗದಿಂದ ಇತ್ತೀಚೆಗೆ ಆಯೋಜಿಸಲ್ಪಟ್ಟ ಉದ್ಯಮಗಳ ಮೇಲೆ ನೋಟು ರದ್ದತಿ ಪರಿಣಾಮಗಳು–ಸಮಸ್ಯೆಗಳು ಮತ್ತು ಸವಾಲುಗಳು ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.‘ಇತ್ತೀಚಿನ ನೋಟು ರದ್ದತಿ ಸಂದರ್ಭದಲ್ಲಿ ಉದ್ದಿಮೆದಾರರು ಭಾರಿ ನಷ್ಟ ಅನುಭವಿಸಿದರು. ರೈತರು ಹಾಗೂ ಶ್ರೀಸಾಮಾನ್ಯರು ತಮ್ಮ ದಿನನಿತ್ಯದ ಕೆಲಸಗಳು ಹಾಗೂ ಮಕ್ಕಳ ಮದುವೆ–ಮುಂಜಿವೆ ಮಾಡಲು ಅತೀವ ಸಂಕಷ್ಟ ಅನುಭವಿಸವಂತಾಯಿತು’ ಎಂದು ದೂರಿದರು.
‘ಭಾರತದಲ್ಲಿ ಈ ಹಿಂದೆ ಅನೇಕ ಸಲ ಅನಾಣ್ಯೀಕರಣ ಮಾಡಲಾಗಿತ್ತು, ಆ ಸಂದರ್ಭಗಳಲ್ಲಿ ಯಾರೊಬ್ಬರಿಗೂ ತೊಂದರೆಯಾಗಲಿಲ್ಲ. ನೋಟು ರದ್ದತಿ ಸಂದರ್ಭದಲ್ಲಿ ಉದ್ಯಮಿಗಳು ತುಂಬಾ ನಷ್ಟ ಅನುಭವಿಸುವಂತಾಯಿತು. ದೇಶದ ಹಿತದೃಷ್ಟಿಯಿಂದ ಮಾಡುವ ಒಳ್ಳೆಯ ಕೆಲಸಗಳನ್ನು ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತಪಡಿಸೋಣ ಆದರೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾದಾಗ ಪ್ರಶ್ನಿಸುವ ಅಧಿಕಾರ ಎಲ್ಲರಿಗಿದೆ’ ಎಂದರು.
ಬಿಎಜೆಎಸ್ಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಮಾತನಾಡಿ, ‘ಭ್ರಷ್ಟಾಚಾರ, ನಕಲಿ ನೋಟು ಚಲಾವಣೆಯಂತಹ ಸಮಸ್ಯೆ ಪರಿಹರಿಸಲು ಅನಾಣ್ಯೀಕರಣ ಅಗತ್ಯ ಎಂದು ಡಾ.ಅಂಬೇಡ್ಕರ್ ಸೇರಿದಂತೆ ಅನೇಕ ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ’ ಎಂದು ಹೇಳಿದರು.ಹಂಸಭಾವಿ ಎಂಎಎಸ್ಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಡಿ.ಎಲ್. ಏಕಬೋಟೆ ಉಪನ್ಯಾಸ ನೀಡಿದರು.ಪ್ರಾಚಾರ್ಯ ಎಲ್.ವಿ. ಸಂಗಳದ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ. ಸೀತಾಳದ ಸ್ವಾಗತಿಸಿದರು. ಬಸವರಾಜಪ್ಪ ಪಿ.ಟಿ. ಪರಿಚಯಿಸಿದರು. ಡಾ. ರವಿ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಬಿ. ಕುಂಬಾರ ನಿರೂಪಿಸಿದರು. ಬಸವರಾಜ ಹುಗ್ಗಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.