ADVERTISEMENT

ಬಂಕಾಪುರ: ಬೂತ್‌ಮಟ್ಟದ ವಿಸ್ತಾರಕರ ಸಭೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 8:42 IST
Last Updated 24 ಜುಲೈ 2017, 8:42 IST

ಶಿಗ್ಗಾವಿ: ‘ಸುಭದ್ರವಾದ ದೇಶ ಕಟ್ಟುವ, ಸಂರಕ್ಷಿಸುವ ಹೊಣೆಗಾರಿಕೆಯ ಪಕ್ಷ ನಮ್ಮದು. ಸರ್ವ ಸಮಾಜಗಳನ್ನು ಜೋಡಿಸುವ ಮೂಲಕ ಅಭಿವೃದ್ಧಿ ಚಿಂತ ನೆಯಲ್ಲಿ ಸಾಗುತ್ತಿದೆ. ಬರೀ ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡು ವುದು ಸರಿಯಲ್ಲ’ ಎಂದು  ಶಾಸಕ ಬಸವರಾಜ ಬೊಮ್ಮಾಯಿ ನುಡಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಅರಳೆಲೆಮಠದ ಆವರಣದಲ್ಲಿ ಭಾನುವಾರ ನಡೆದ ಬೂತ್ ಮಟ್ಟದ ವಿಸ್ತಾರಕರ ಸಭೆಯನ್ನು  ಉದ್ಘಾಟಿಸಿ ಅವರು ಮಾತನಾಡಿದರು.

‘ಬಂಕಾಪುರದಲ್ಲಿ ಕಳೆದ 6 ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಸುಮಾರು 604 ಮನೆಗಳನ್ನು ಜಿ+1ರಲ್ಲಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಮಾರು ₹25.76 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದರು.

ADVERTISEMENT

‘ಸವಣೂರಿನ 1,020 ಮನೆಗಳಿಗೆ ಸುಮಾರು ₹ 38.44 ಕೋಟಿ, ಶಿಗ್ಗಾವಿಗೆ 204 ಮನೆಗಳಿಗೆ ₹906 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲಿ ಅವುಗಳ ಕಾಮಗಾರಿ ಆರಂಭವಾಗಲಿದೆ’ ಎಂದರು.

‘ಪ್ರತಿ ವರ್ಷ ಖಾಲಿ ಜಾಗ ಇರುವವರಿಗೆ ಮನೆ ಕಟ್ಟಿಕೊಳ್ಳಲು ಅಂಬೇಡ್ಕರ್ ಯೋಜನೆಯಡಿ ಪುರಸಭೆ ವತಿಯಿಂದ ಸುಮಾರು ₹3.33 ಲಕ್ಷ ಹಣ ನೀಡಲಾಗುತ್ತಿದೆ. ಸುಮಾರು 6 ಕೋಟಿ ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಸುವರ್ಣ ಗ್ರಾಮ, ಸುವರ್ಣ ಭೂಮಿ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ’ ಎಂದು ಸಾಧನೆ ಗಳನ್ನು ಪಟ್ಟಿ ಮಾಡಿದ ಅವರು, ‘ಕಾಂಗ್ರೆಸ್‌ ಬಡತನ ನಿರ್ಮೂಲನೆ ಮಾಡುವುದಾಗಿ ಹೇಳುತ್ತ ಬರುತ್ತಿದೆಯೇ ವಿನಾ ಕೆಲಸ ಮಾಡುತ್ತಿಲ್ಲ’ ಎಂದರು.

ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ‘ರಾಜ್ಯದಲ್ಲಿ ಸುಮಾರು 28 ಸಾವಿರ ಹಳ್ಳಿಗಳಿಗೆ ಇನ್ನು ವಿದ್ಯುತ್‌ ಸಂಪರ್ಕವಿಲ್ಲ. ಜಿಲ್ಲೆಯಲ್ಲಿ ಮೇಕೆಗಳು ಮೃತಪಟ್ಟ ಪರಿಹಾರಧನ ₹2.5ಕೋಟಿ ಹಣ ಬಿಡುಗಡೆ ಮಾಡಿಲ್ಲ. ಅದರಿಂದ ಬಡ ಜನತೆ ತತ್ತರಿಸಿ ಹೋಗಿ ದ್ದಾರೆ. ಅದು ಕಾಂಗ್ರೆಸ್‌ ಸರ್ಕಾರದ ಕೊಡುಗೆ’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವಣ್ಣ ಚಾಕಲಬ್ಬಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪುರಸಭೆ ಸದಸ್ಯರು, ಪಕ್ಷದ ವಿವಿಧ ಘಟಕಗಳ ಮುಖಂಡರು ಇದ್ದರು. ಬಸವರಾಜ ನಾರಾಯಣಪುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.