ರಾಣೆಬೆನ್ನೂರು: ‘ಮಹಾದಾಯಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎ.ಕೆ.ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿದ್ದ ಪಾದಯಾತ್ರೆ ಶುಕ್ರವಾರ ನಗರ ತಲುಪಿದೆ.
ಇದೇ ವೇಳೆ, ಇಲ್ಲಿನ ಮಿನಿ ವಿಧಾನ ಸೌಧದ ಬಳಿ ಹಕ್ಕು ಪತ್ರ ವಿತರಣೆಗೆ ಆಗ್ರಹಿಸಿ ಕಳೆದ 75 ದಿನಗಳಿಂದ ಧರಣಿ ನಡೆಯುತ್ತಿರುವ ಬಗರ್ ಹುಕುಂ ಸಾಗುವಳಿದಾರರ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮುಖಂಡರಾದ ಎಂ.ಜಿ.ಸನ್ನಿದಿ ಮತ್ತು ಬಸವರಾಜ ಅವರಾದಿ, ‘ಎಂ.ಕೆ. ಹುಬ್ಬಳ್ಳಿಯಿಂದ ಮೇ 7ರಂದು ಪಾದಯಾತ್ರೆ ಪ್ರಾರಂಭವಾಗಿದೆ. ಇನ್ನು ಏಳೆಂಟು ದಿನಗಳಲ್ಲಿ ಬೆಂಗಳೂರು ತಲುಪುತ್ತೇವೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ಎಲ್ಲ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಲಾಗುವುದು’ ಎಂದು ತಿಳಿಸಿದರು.
‘ರೈತರ ಸಾಲ ಮನ್ನಾ, ಕಳಸಾ ಬಂಡೂರಿ ವಿಷಯದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದು ವಿವರಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮನೆಯಲ್ಲಿ ಸ್ಟುಡಿಯೊ ನಿರ್ಮಿಸಿಕೊಳ್ಳಲು ಹಣವಿದೆ. ಆದರೆ, ಅನ್ನ ಹಾಕುವ ರೈತರ ಸಾಲ ಮಾಡಲು ಮುಂದಾಗುತ್ತಿಲ್ಲ. ವಿದೇಶಿ ಕಂಪೆನಿಗಳಿಗೆ ಸಬ್ಸಿಡಿ ಕೊಟ್ಟು ಭೂಮಿ ಹಂಚಿಕೆ ಮಾಡುತ್ತಾರೆ’ ಎಂದು ದೂರಿದರು.
ಎಸ್.ಡಿ.ಹಿರೇಮಠ, ದುಂಡೆಪ್ಪ ಬೆಲ್ಲದ, ತಮ್ಮಣ್ಣ ಮುದಕಣ್ಣನವರ, ಕೃಷ್ಣಪ್ಪ ಲಮಾಣಿ, ಎಂ.ಜೆ. ಕಮದೋಡ, ರವಿ ಭತ್ತದ, ಅಶೋಕ ಹಲಗಿ, ಶಂಕರ ಕಮತಗಿ, ಶಾರದಾ ಡವಳೇರ, ರುಕ್ಮವ್ವ ಕಲಕೇರಿ, ಮಹಾಂತೇಶ ದೊಡ್ಡಮನಿ, ಬಾಳಯ್ಯ ಉದೇಶಿಮಠ, ಮಾಲತೇಶ ಶಿಡಗನಹಾಳ, ತಮ್ಮಣ್ಣ ಕೋಲಕಾರ, ಸಪ್ನಾ ಪಾಟೀಲ, ಕಸ್ತೂರಮ್ಮ ನಿಜ ಕೋಡ, ಶೋಭಾ ತೆಲಗಿ, ಸುರೇಶ ನರಸ ಮ್ಮನವರ, ಕಲ್ಮೇಶ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.