ADVERTISEMENT

ಬಸ್‌ಗಾಗಿ ವಿದ್ಯಾರ್ಥಿಗಳಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 6:04 IST
Last Updated 19 ನವೆಂಬರ್ 2017, 6:04 IST

ಹಿರೇಕೆರೂರ: ‘ಶಾಲೆ, ಕಾಲೇಜುಗಳ ಸಮಯಕ್ಕೆ ತಕ್ಕಂತೆ ಬಸ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿ ತಾಲ್ಲೂಕಿನ ಬತ್ತೀಕೊಪ್ಪ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸಂಚಾರಕ್ಕೆ ತೊಂದರೆಯಾಯಿತು.

‘ಬಸ್‌ಗಳ ಸೌಲಭ್ಯ ಇಲ್ಲದೇ ಬತ್ತೀಕೊಪ್ಪ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಾಣೆಬೆನ್ನೂರು–ಹಿರೇಕೆರೂರ ರಸ್ತೆಯ ಕ್ರಾಸ್‌ಗೆ ಬಂದು ಬಸ್‌ ಹತ್ತಬೇಕಿದೆ. ಇದರಿಂದ ವಿದ್ಯಾರ್ಥಿಗಳಿಗೆ, ಹಿರಿಯರಿಗೆ, ಮಹಿಳೆಯರಿಗೆ ಹಾಗೂ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ನಿತ್ಯ ಐದು ಬಸ್‌ಗಳು ಊರೊಳಗೆ ಬಿಡಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಹಿರೇಕೆರೂರ ವಾಯವ್ಯ ಸಾರಿಗೆ ಘಟಕ ವ್ಯವಸ್ಥಾಪಕ ಎಸ್.ಶಿವಮೂರ್ತಿ, ‘ಬತ್ತೀಕೊಪ್ಪ ಊರೊಳಗೆ ಬಸ್‌ಗಳನ್ನು ಬಿಡಲು ತಕರಾರಿಲ್ಲ. ಆದರೆ, ನಿರೀಕ್ಷಿತ ಆದಾಯದ ಸಿಗುವುದಿಲ್ಲ. ಹೀಗಾಗಿ ಹಿರೇಕೆರೂರ–ರಾಣೆಬೆನ್ನೂರಿಗೆ ಹೋಗುವ ಪ್ರಯಾಣಿಕರಿಗೆ ಇದರಿಂದ ತೊಂದರೆ ಆಗುತ್ತದೆ. ಆದರೂ ನಿತ್ಯ ಹೆಚ್ಚುವರಿ 2 ಬಾರಿ ಊರೊಳಗೆ ಬಸ್‌ ಓಡಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.