ಹಾನಗಲ್: ನರೇಗಾ ಯೋಜನೆಯಡಿ ದೊರೆತ ಧನಸಹಾಯದಿಂದ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಎರಡು ಎಕರೆ ಜಮೀನಿನಲ್ಲಿ ಬಾಳೆ ಬೆಳೆದು ಬೆಳೆಗಾರರೊಬ್ಬರು ಬದುಕನ್ನು ಹಸನಾಗಿಸಿಕೊಂಡಿದ್ದಾರೆ.
ಚನ್ನಕೇಶವ ಬಡಿಗೇರ ಎಂಬುವರು ತಮ್ಮ ಪತ್ನಿ ಸುಜಾತಾ ಅವರಿಗೆ ತವರಿನಿಂದ ಎರಡು ಎಕರೆ ಜಮೀನು ಬಂದಿತ್ತು.ಆರಂಭದಲ್ಲಿ ಸುಗಂಧರಾಜ, ಚಂಡು ಹೂವು ಬೆಳೆಯುತ್ತಿದ್ದರು. ನಿರ್ವಹಣೆ ಕಷ್ಟವಾಗಿದ್ದರಿಂದ ಬಾಳೆ ಬೆಳೆಯಲು ಮುಂದಾದರು. ಇದರಿಂದ ವರ್ಷಕ್ಕೆ ಬರುತ್ತಿದ್ದ ಆದಾಯ ನಾಲ್ಕೂ ಪಟ್ಟು ಹೆಚ್ಚಾಗಿದೆ.
ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತಂದೆ ಗೋಪಾಲಾಚಾರ್ಯ ಬಡಿಗೇರ ಉಸ್ತುವಾರಿ ಬಿಟ್ಟರೆ ಯಾವುದೇ ಖರ್ಚು ಇಲ್ಲ. 2,500 ಬಾಳೆ ಗಿಡಗಳಲ್ಲಿ ಫಲ ಉತ್ತಮವಾಗಿ ಬಂದಿದೆ. ಮೊದಲ ಹಂತದ ಇಳುವರಿ 15 ಟನ್ ಬಂದಿದೆ. ಸದ್ಯ 2ನೇ ಹಂತದ ಇಳುವರಿ ಕಟಾವಿಗೆ ಬಂದಿದೆ. 20 ಟನ್ಗೂ ಅಧಿಕ ಇಳುವರಿ ಭರವಸೆ ಇದೆ.
‘ಈ ಬಾರಿಯ ಇಳುವರಿ ₹ 1 ಲಕ್ಷ ಆದಾಯ ನೀಡುವ ಆಶಯವಿದೆ. ಕಡಿಮೆ ನಿರ್ವಹಣೆ, ಅಧಿಕ ಲಾಭದ ಸಲಹೆಯನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನೀಡಿದ್ದಾರೆ’ ಎಂದು ಚನ್ನಕೇಶವ ಬಡಿಗೇರ ಹಂಚಿಕೊಂಡರು.
‘2016–17 ನೇ ಸಾಲಿನ ನರೇಗಾ ಅಡಿಯಲ್ಲಿ ಚನ್ನಕೇಶವರ ಅವರಿಗೆ ತೋಟಗಾರಿಕೆ ಇಲಾಖೆಯಿಂದ ₹ 45 ಸಾವಿರ ಸಹಾಯಧನ ನೀಡಲಾಗಿತ್ತು. ಕೊಳವೆ ಬಾವಿ ಹೊಂದಿರುವ ಚಿಕ್ಕ ಹಿಡುವಳಿದಾರರಿಗೆ ಮತ್ತು ಎಸ್.ಸಿ, ಎಸ್.ಟಿ. ರೈತರಿಗೆ ಇನ್ನು ಅನೇಕ ಸೌಲಭ್ಯಗಳಿವೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆರ್.ಎಲ್.ಮೇಲಿನಮನಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.