ADVERTISEMENT

‘ಬುದ್ಧ ತತ್ವದ ಮರೆವು ವ್ಯಥೆಗಳಿಗೆ ಕಾರಣ’

​ಪ್ರಜಾವಾಣಿ ವಾರ್ತೆ
Published 13 ಮೇ 2017, 9:16 IST
Last Updated 13 ಮೇ 2017, 9:16 IST

ಹಾವೇರಿ: ‘ಆಸೆಯೇ ದುಃಖಕ್ಕೆ ಮೂಲ ಎಂದು ಶತಮಾನಗಳ ಹಿಂದೆ ಬುದ್ಧರು ಹೇಳಿದ್ದಾರೆ. ಬುದ್ಧರ ತತ್ವವನ್ನು ಇಂದು ಮರೆತಿರುವುದೇ ಜೀವನದ ವ್ಯಥೆಗಳಿಗೆ ಕಾರಣವಾಗಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹರಸೂರು ಬಣ್ಣದಮಠದಲ್ಲಿ ಸೋಮವಾರ ಜರುಗಿದ ಮಲ್ಲಿಕಾರ್ಜುನ ಸ್ವಾಮೀಜಿ 32 ನೇ ಪುಣ್ಯಾರಾಧನೆ ಹಾಗೂ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಸ್ವಾಮೀಜಿ 7 ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಬುದ್ಧರು ನೀಡಿದ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದ ಅವರು,‘ಅತಿ ಆಸೆಯ ವ್ಯಕ್ತಿಗಳು ಸಂಪತ್ತು ಗಳಿಸುವ ನಿಟ್ಟಿನಲ್ಲಿ ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ. ಬಳಿಕ ಅನಾರೋಗ್ಯ ಪೀಡಿತನಾರಾಗುತ್ತಿದ್ದಾರೆ. ಆ ಬಳಿಕ, ಗಳಿಸಿದ್ದನ್ನೆಲ್ಲ ಖರ್ಚು ಮಾಡಿದರೂ, ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಅದಕ್ಕಾಗಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು’ ಎಂದರು.

ADVERTISEMENT

‘ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳು ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಬದುಕು ಸಾರ್ಥಕವಾಗತ್ತದೆ. ಸಕಲ ಜೀವಾತ್ಮಕ್ಕೂ ಹಿತ ಉಂಟು ಮಾಡುವ ಮೌಲ್ಯಗಳನ್ನು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ, ಜಪ ಮತ್ತು ಧ್ಯಾನ ಎಂಬ ದಶಸೂತ್ರಗಳು ಬದುಕಿನಲ್ಲಿ ನೆಮ್ಮದಿ ನೀಡುತ್ತವೆ’ ಎಂದರು.

‘ಬಣ್ಣದಮಠವನ್ನು ಭಕ್ತರ ಸಹಕಾರದಿಂದ ಅಭಿವೃದ್ಧಿಪಡಿಸುತ್ತಿರುವುದು ಅತ್ಯಂತ ಸಂತೋಷವನ್ನು ಉಂಟು ಮಾಡಿದೆ’ ಎಂದು ಶ್ಲಾಘಿಸಿದರು. ಬಣ್ಣದ ಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ,‘ಮನುಷ್ಯನ ಬದುಕಿನಲ್ಲಿ ಗುರಿ ಮತ್ತು ಗುರು ಇರಬೇಕು. ಧರ್ಮದ ದಿಕ್ಸೂಚಿ ಇಲ್ಲದೇ ಬಾಳು ಬಲಗೊಳ್ಳದು’ ಎಂದು ಪ್ರತಿಪಾದಿಸಿದರು.

ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಡಾ.ಉಮೇಶ ಹಿರೇಮಠ, ಈರಪ್ಪ ಲಮಾಣಿ, ಡಾ. ಸಂಜಯ ಡಾಂಗೆ, ಚನ್ನಬಸಯ್ಯ ಲಕ್ಷ್ಮೇಶ್ವರಮಠ, ಚಂದ್ರಣ್ಣ ಪಟ್ಟಣಶೆಟ್ಟರ, ವೈಭವ ವಾಳ್ವೇಕರ, ವೀರೇಶ ಮತ್ತಿಹಳ್ಳಿ, ದಾಕ್ಷಾಯಣಿ ಗಾಣಿಗೇರ, ಮಮತಾ ಜಾಬೀನ್‌, ಭಾಗ್ಯಲಕ್ಷ್ಮಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.