ಹಾವೇರಿ: ‘ಜನರಿಗೆ ತಪ್ಪು ತಿಳಿವಳಿಕೆ ನೀಡಿ ಆಡಳಿತ ನಡೆಸಿದರೆ, ಅಂದು ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಂದ ಗತಿಯೇ ಪ್ರಧಾನಿ ನರೇಂದ್ರ ಮೋದಿಗೂ ಬರಲಿದೆ’ ಎಂದು ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಹೇಳಿದರು.
ನಗರದ ದೇವರಾಜ ಅರಸು ಭವನದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಯೋಜಿಸಿದ ‘ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಂಚಾಯ್ತಿ ವ್ಯವಸ್ಥೆಯಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬೆಂಗಳೂರಿನಲ್ಲಿ ಸಭೆ ಕರೆದಿದ್ದರು. ಆದರೆ, ಇತರ ಪಕ್ಷಗಳು ಬೆಂಬಲಿಸಲಿಲ್ಲ. ಹಿಂದೆ ಹಿಂದುಳಿದ ವರ್ಗಗಳಿಗೆ, ಮಹಿಳೆಯರಿಗೂ ಹಿಂದೆ ಮೀಸಲಾತಿ ಇರಲಿಲ್ಲ’ ಎಂದ ಅವರು, ‘ಆದರೆ, ತಮ್ಮ ಹಕ್ಕುಗಳನ್ನು ನಿಜವಾಗಿಯೂ ರಕ್ಷಿಸಿದವರು ಯಾರು? ತುಳಿಯಲು ಯತ್ನಿಸಿದವರು ಯಾರು? ಎಂಬುದನ್ನೇ ತಿಳಿದುಕೊಳ್ಳದ ಜನತೆ ಯಾವುದೋ ‘ಮೋಡಿ’ಗೆ ಬಲಿಯಾಗಿ ಯಾರಿಗೋ ಮತ ಹಾಕುತ್ತಾರೆ. ನಮ್ಮವರೂ (ಕಾಂಗ್ರೆಸ್) ಸರಿಯಾಗಿ ಜನರಿಗೆ ತಿಳಿಸದೇ ತಾವೇ ಸೋಲು ತಂದುಕೊಳ್ಳುತ್ತಾರೆ’ ಎಂದರು.
‘ಪಂಚಾಯತ್ರಾಜ್ನಲ್ಲಿ ‘ಮೀಸ ಲಾತಿ’ ಬಾರದಿದ್ದರೆ ನಿರ್ದಿಷ್ಟ ವರ್ಗವೇ ಅಧಿಕಾರ ಅನುಭವಿಸುತ್ತಿತ್ತು’ ಎಂದ ಅವರು, ‘ಮೀಸಲಾತಿಗೆ ಪೂರ್ವದಲ್ಲಿ ನಮ್ಮೂರಲ್ಲಿ ನಮ್ಮ ಚಿಕ್ಕಪ್ಪನೇ ಸತತವಾಗಿ ಪಂಚಾಯ್ತಿ ಅಧ್ಯಕ್ಷರಾಗುತ್ತಿದ್ದರು. ಇಲ್ಲಿಯೂ ದೊಡ್ಡ ಮನೆತನದವರೇ ಅಧಿಕಾರದಲ್ಲಿ ಇರುತ್ತಿದ್ದರು’ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.