ADVERTISEMENT

ರೈತರ ಸಾಲ ಸಂಪೂರ್ಣ ಮನ್ನಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:18 IST
Last Updated 18 ಏಪ್ರಿಲ್ 2017, 5:18 IST

ಹಾವೇರಿ:  ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ರೈತರು ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹನುಮಂತಪ್ಪ ಹುಚ್ಚಣ್ಣನವರ, ‘ಬಡವರಿಗೆ ಮನೆ ಕಟ್ಟಲು ಮರಳು ಸಿಗುತ್ತಿಲ್ಲ. ಹೀಗಾಗಿ ಹೊಸ ಮರಳು ನೀತಿ ಜಾರಿಗೆ ತರಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು.

ಸಾರಿಗೆ ಸಂಸ್ಥೆಯ ಗ್ರಾಮೀಣ ಸಾರಿಗೆ ಬಸ್‌ಗಳು ಹಳೇಯದಾಗಿವೆ. ಅವು ಅಲ್ಲಲ್ಲಿ ಕೆಟ್ಟು ನಿಲ್ಲುತ್ತವೆ. ಗ್ರಾಮೀಣ ಭಾಗಕ್ಕೂ ಉತ್ತಮ ಬಸ್‌ಗಳನ್ನು ಹಾಕಬೇಕು. ಭರಡಿಯಿಂದ ಕಲ್ಲದೇವರು ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಘಟಕದ ಸಂಚಾಲಕ ಮಾಲತೇಶ ಪೂಜಾರ ಮಾತನಾಡಿ, ‘ಬೆಳೆಹಾನಿ ಪರಿಹಾರವನ್ನು ಸಮರ್ಪಕವಾಗಿ ವಿತರಿಸಬೇಕು. ಬಾಕಿ ಇರುವ ₹ 18 ಕೋಟಿ ಬೆಳೆವಿಮೆ ಹಣವನ್ನು ವಿಮಾ ಕಂಪೆನಿಯಿಂದ ವಸೂಲು ಮಾಡಿ, ರೈತರಿಗೆ ವಿತರಣೆ ಮಾಡಬೇಕು. ರೈತರ ಮೇಲೆ ಒತ್ತಡ ಹೇರಿ ಸಾಲ ವಸೂಲಾತಿ ಮಾಡಬಾರದು.

ADVERTISEMENT

ತಹ  ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳು, ಮೈಕ್ರೋಫೈನಾನ್ಸ್ ವಿರುದ್ಧ ಕ್ರಮಕೈಗೊಳ್ಳಬೇಕು. ಅಕ್ರಮ –ಸಕ್ರಮದ ಅಡಿಯಲ್ಲಿ ಹೆಸ್ಕಾಂಗೆ ಹಣ ತುಂಬಿದ ರೈತರಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಕಾಮಗಾರಿಗೆ ಜಮೀನು ಕೊಟ್ಟ ಹಾವೇರಿ ತಾಲ್ಲೂಕಿನ ಭರಡಿ ಗ್ರಾಮದ ರೈತರಿಗೆ ಕೂಡಲೇ ಪರಿಹಾರದ ಹಣ ವಿತರಿಸಬೇಕು’ ಎಂದು ಆಗ್ರಹಿಸಿದರು.ಮಂಜಣ್ಣ ಮುದಿಯಪ್ಪನವರ, ನಾಗರಾಜ ಮ ದೊಡ್ಡಕುರುಬರ, ಹಾಸೀಂ ಜಗಳೂರು, ಪರಮೇಶಪ್ಪ ಕಟ್ಟೆಕಾರ, ಪ್ರಬಣ್ಣ ರಾಗೇರ, ಜಗದೀಶ ಬಳ್ಳಾರಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.