ಶಿಗ್ಗಾವಿ: ‘ಕೃಷಿಕರು ವಿಷಮುಕ್ತ ಆಹಾರ ಬೆಳೆ ಬೆಳೆಯುವ ಮೂಲಕ ಆರೋಗ್ಯಯುತ, ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಅದಕ್ಕಾಗಿ ಸಾವಯುವ ಬೆಳೆಗೆ ಮೊದಲ ಆದ್ಯತೆ ನೀಡಿ’ ಎಂದು ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನ ವಿಭಾದ ಮುಖ್ಯಸ್ಥ ಡಾ.ಚಿದಾನಂದ ಮನ್ಸೂರ ರೈತರಿಗೆ ಸಲಹೆ ನೀಡಿದರು.ಪಟ್ಟಣದಲ್ಲಿ ಶನಿವಾರ ನಡೆದ ಸಿರಿಧಾನ್ಯ ಮಾರಾಟ ಕೇಂದ್ರ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾವಯುವ ಕೊರತೆಯಿಂದ ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜೊತೆಗೆ ಸಾವಯವ ಆಹಾರ ಬೆಳೆಗಳನ್ನು ಜನಸಂಖ್ಯೆಗೆ ತಕ್ಕಷ್ಟು ಬೆಳೆಯಲು ಸಾಧ್ಯವಿಲ್ಲ. ಆದರೂ ಸಹ ಹೆಚ್ಚಿನ ರೈತರು ಸಾವಯುವ ಕೈಕೊಳ್ಳಬೇಕು’ ಎಂದರು.‘ರೈತರಿಗೆ ಕಳೆ, ಕೀಟ, ರೋಗಬಾಧೆ ವೈರಿಗಳಾಗಿ ಕಾಡುತ್ತಿವೆ. ಆದರೆ ಅತೀ ಸಣ್ಣ ಹಿಡುವಳಿದಾರ ರೈತರು ಸಾವಯವ ಬಳಕೆ ಮಾಡುವುದು ಸುಲಭವಾಗಿದೆ. ಅಲ್ಲದೆ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ರಿಯಾಯ್ತಿ ಸೌಲಭ್ಯವನ್ನು ಸಾವಯವ ಬೆಳೆಗಾರರಿಗೂ ನೀಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ವಸತಿ ನಿಲಯಗಳಲ್ಲಿ ವಾರಕ್ಕೆ ಒಂದು ಬಾರಿಯಾದರೂ ಸಾವಯವ ಆಹಾರವನ್ನು ನೀಡುವ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿಮರದ ಮಾತನಾಡಿ, ‘ಇಂದಿನ ಆಹಾರ ಪದ್ಧತಿಯಿಂದ ಪೌಷ್ಠಿಕಾಂಶದ ಕೊರತೆಯಿಂದ ಕೃಷಿ ಚಟುವಟಿಕೆಗಳು ಬದಲಾಗುತ್ತಿವೆ. ಆಯುಷ್ಯ,ಆರೋಗ್ಯ ಕಡಿಮೆಯಾಗುತ್ತಿದೆ. ಮನುಷ್ಯನ ದೇಹ ವಿಷಕಾರಿಯಾಗುತ್ತಿದೆ. ಹೀಗಾಗಿ ಮೂಲ ಕೃಷಿಯತ್ತ ಸಾಗಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.ಮುಗಳಿ ನೇಗಿಲಯೋಗಿ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಶಿವಾನಂದ ರಾಮಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಸಾವಯವ ಸಮನ್ವಯಾಧಿ ಕಾರಿ ಶ್ರೀಧರ, ಕೃಷಿ ಇಲಾಖೆ ಅಧಿಕಾರಿ ವಿಜಯಕುಮಾರ, ಚೈತನ್ಯ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಜೀನ್ನಪ್ಪ ವರೂರ, ಹೊಸಪೇಟೆ ವಾಹಿನಿ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಕೆ.ಶಿವಕುಮಾರ, ಪ್ರಗತಿಪರ ರೈತರಾದ ಸಿ.ಡಿ.ಪಾಟೀಲ, ಮಹಾವೀರ ಕೋಳೂರ, ಓಂಕಾರಗೌಡ ಮತ್ತಿತರರು ಇದ್ದರು. ಶಿವರಾಜ ಕಟ್ಟಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.