ADVERTISEMENT

ಮೂಢನಂಬಿಕೆ ನಿರ್ಮೂಲನೆಗೆ ಕಾಂತ್ರಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 11:25 IST
Last Updated 24 ಜನವರಿ 2018, 11:25 IST
ಹಾನಗಲ್‌ನಲ್ಲಿ ಮಂಗಳವಾರ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳ ಭವ್ಯ ಮೆರವಣಿಗೆಗೆ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು. ಗಂಗಾಮತ ಸಮಾಜದ ನಾಯಕ ಚಂದ್ರಪ್ಪ ಜಾಲಗಾರ ಇದ್ದಾರೆ
ಹಾನಗಲ್‌ನಲ್ಲಿ ಮಂಗಳವಾರ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳ ಭವ್ಯ ಮೆರವಣಿಗೆಗೆ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು. ಗಂಗಾಮತ ಸಮಾಜದ ನಾಯಕ ಚಂದ್ರಪ್ಪ ಜಾಲಗಾರ ಇದ್ದಾರೆ   

ಹಾನಗಲ್: ‘ಪುರೋಹಿತ ಶಾಹಿ ವ್ಯವಸ್ಥೆ ಸಿಡಿದೆದ್ದು ಸಮಾನತೆಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಬಂಡಾಯ ಸಾಹಿತ್ಯದಂತಹ ನಿಷ್ಠುರ ವಚನಗಳ ಮೂಲಕ ಸಮಾಜ ತಿದ್ದುವ ಕಾಯಕವನ್ನು ಅಂಬಿಗರ ಚೌಡಯ್ಯನವರು ಮಾಡಿದ್ದರು’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಎಪಿಎಂಸಿ ಪಕ್ಕದ ಮೈದಾನ ದಲ್ಲಿ ಗಂಗಾಮತ ಸಮಾಜದಿಂದ ಮಂಗಳವಾರ ನಡೆದ ‘ನಿಜಶರಣ ಅಂಬಿಗರ ಚೌಡಯ್ಯ’  ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಪರಿವರ್ತನಾ ದಿನ ದಂದು ಸ್ಮಶಾನ ವಾಸ್ತವ್ಯದ ಮೂಲಕ ಭಯ, ಮೂಢನಂಬಿಕೆ ನಿವಾರಿಸುವ ಮತ್ತು ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ವ್ಯರ್ಥವಾಗುತ್ತಿದ್ದ ಹಾಲು ಬಡವರು, ರೋಗಿಗಳಿಗೆ ವಿತರಿಸುವ ಬಸವ ಪಂಚಮಿ ಆಚರಿಸುವ ಕ್ರಾಂತಿಯನ್ನು ಆರಂಭಿಸಲಾಗಿದೆ. ಇದು ಅಗತ್ಯವಾಗಿದೆ’ ಎಂದರು.

ADVERTISEMENT

ಗಂಗಾಮತ ಸಮಾಜದ ನಾಯಕ ಚಂದ್ರಪ್ಪ ಜಾಲಗಾರ ಮಾತನಾಡಿ, ‘ಗಂಗಾಮತ ಸಮಾಜದ ಅಭಿವೃದ್ಧಿ ಪ್ರಾಧಿ ಕಾರ ರಚನೆಯಾಗಬೇಕು, ಅಂಬಿಗರ ಚೌಡಯ್ಯನವರ ವಚನಗಳ ಸಂಗ್ರಹಣೆ ಮತ್ತು ಪಠ್ಯದಲ್ಲಿ ಚೌಡಯ್ಯನವರ ವಚನಗಳು ಸೇರ್ಪಡೆಯಾಗಬೇಕು’ ಎಂದರು ಆಗ್ರಹಿಸಿದರು.

ಬಿಜೆಪಿ ಮುಖಂಡ ಸಿ.ಎಂ.ಉದಾಸಿ ಮಾತನಾಡಿ, ‘12 ನೇ ಶತಮಾನ ಕನ್ನಡ ಸಾಹಿತ್ಯದ ಮಹತ್ವದ ಘಟ್ಟ. ಅಂಬಿಗ ವೃತ್ತಿಯಲ್ಲಿದ್ದ ಚೌಡಯ್ಯನವರು ಬಂಡಾಯ ಸಾಹಿತಿಯಾಗಿ ಗುರುತಿಸಿಕೊಂಡು 2,000 ಕ್ಕೂ ಅಧಿಕ ವಚನ ರಚಿಸಿದವರು. ಮೋಕ್ಷ ಮಾರ್ಗವನ್ನು ಪ್ರತಿಪಾಧಿಸಿದವರು, ಗಹನ ವಿಚಾರಗಳನ್ನು ನಿಷ್ಠುರತೆಯಿಂದ ವಚನಗಳಲ್ಲಿ ಸಾರಿದವರು’ ಎಂದರು. ತಹಶೀಲ್ದಾರ್‌ ಶಕುಂತಲಾ ಚೌಗಲಾ ಮಾತನಾಡಿದರು.

ನರಶಿಪುರ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಅಕ್ಕಿಆಲೂರ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮೈಸೂರ ಮಹರಾಜಾ ಕಾಲೇಜು ನಿವೃತ್ತ ಪ್ರಾಧ್ಯಾಪಕಿ ಎಚ್‌.ಎಂ.ವಸಂತಮ್ಮ ಉಪನ್ಯಾಸ ನೀಡಿದರು. ಗಂಗಾಮತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಂದ್ರ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಮನೋಹರ ತಹಸೀಲ್ದಾರ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಟಾಕನಗೌಡ ಪಾಟೀಲ, ಮುಖಂಡರಾದ ಬಿ.ಶಿವಪ್ಪ, ಯಾಸೀರಖಾನ್‌ ಪಠಾಣ, ಎ.ಎಂ.ಪಠಾಣ ಇದ್ದರು.

ಮೆರವಣಿಗೆ: ಇದಕ್ಕೂ ಮುನ್ನ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳನ್ನು ಅಕ್ಕಿಆಲೂರ ಮೂಲಕ ಬೈಕ್‌ ರ‍್ಯಾಲಿಯಲ್ಲಿ ಪಟ್ಟಣಕ್ಕೆ ಸ್ವಾಗತಿಸಲಾಯಿತು. ಇಲ್ಲಿನ ಕುಮಾರೇಶ್ವರ ವಿರಕ್ತಮಠದಿಂದ ಕುಂಭಮೇಳದ ಸಮೇತ ಆರಂಭ ಗೊಂಡ ಶ್ರೀಗಳ ಭವ್ಯ ಮೆರವಣಿಗೆಗೆ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು.

* * 

ಪ್ರತಿಯೊಬ್ಬರಿಗೂ ಬುದ್ಧ, ಬಸವಣ್ಣ, ಅಂಬೇಡ್ಕರ್‌ ವ್ಯಕ್ತಿತ್ವ ಆದರ್ಶವಾದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ
ಸತೀಶ ಜಾರಕಿಹೊಳಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.