ಕಲಬುರ್ಗಿ: ನಗರದ ಶರಣ ಬಸವೇಶ್ವರ ಕೆರೆಯಲ್ಲಿ ಶನಿವಾರದಿಂದ ಮೀನು ಶಿಕಾರಿ ಶುರುವಾಗಿದೆ.ಶರಣ ಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಕೆರೆಯಲ್ಲಿ ಒಂದೂವರೆ ವರ್ಷದ ಹಿಂದೆ ಮೀನಿನ ಮರಿಗಳನ್ನು ಬಿಡಲಾಗಿತ್ತು. ಅವು ಬೆಳೆದು ದೊಡ್ಡದಾಗಿವೆ.ಯಾದಗಿರಿಯ ಮಲ್ಲಿಕಾರ್ಜುನ ತಾಯಪ್ಪ ಅವರು ₹26 ಲಕ್ಷಕ್ಕೆ ಗುತ್ತಿಗೆ ಪಡೆದಿದ್ದು ಮೀನು ಹಿಡಿಯಲು ಬೆಸ್ತರನ್ನು ನೇಮಿಸಿಕೊಂಡಿದ್ದಾರೆ. ಅವರು ಬಲೆಯನ್ನು ಬೀಸಿ ಮೊದಲ ದಿನವೇ ಭರ್ಜರಿಯಾಗಿ ಮೀನು ಶಿಕಾರಿ ಮಾಡಿ, ಡಬ್ಬಕ್ಕೆ ತುಂಬುವುದರಲ್ಲಿ ನಿರತರಾಗಿದ್ದರು.
ಗುತ್ತಿಗೆದಾರನಿಗೆ ಒಂದು ತಿಂಗಳ ಸಮಯ ನೀಡಲಾಗಿದೆ. ಅಷ್ಟರೊಳಗೆ ಎಲ್ಲ ಮೀನುಗಳನ್ನು ಹಿಡಿಯುವಂತೆ ಸೂಚಿಸಲಾಗಿದೆ. ಪ್ರತಿ ಒಂದೂವರೆ ಅಥವಾ ಎರಡು ವರ್ಷಕ್ಕೊಮ್ಮೆ ಮೀನು ಮರಿಗಳನ್ನು ಬಿಡಲಾಗುತ್ತದೆ. ಅವು ದೊಡ್ಡದಾದ ಬಳಿಕ ಟೆಂಡರ್ ಮೂಲಕ ಹರಾಜು ಮಾಡಲಾಗುತ್ತದೆ.
‘ಕಳೆದ 3–4 ವರ್ಷಗಳಲ್ಲಿ ₹8 ರಿಂದ ₹9 ಲಕ್ಷಕ್ಕೆ ಟೆಂಡರ್ ನೀಡಲಾಗಿತ್ತು. ಇದೇ ಮೊದಲ ಬಾರಿಗೆ ₹26 ಲಕ್ಷಕ್ಕೆ ಟೆಂಡರ್ ನೀಡಲಾಗಿದ್ದು, ಇದು ದಾಖಲೆಯ ಮೊತ್ತವಾಗಿದೆ’ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರೂ ಆದ ಹರ್ಷಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.