ADVERTISEMENT

ಅಮರ್ಜಾಗೆ ನೀರು: ₹500 ಕೋಟಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:10 IST
Last Updated 16 ಏಪ್ರಿಲ್ 2017, 9:10 IST
ಆಳಂದ ತಾಲ್ಲೂಕಿನ ಕೊರಳ್ಳಿ ಗ್ರಾಮದಲ್ಲಿ ನಡೆದ ಜನಸ್ಪಂದನ ಮತ್ತು ಆರೋಗ್ಯ ಕಲ್ಯಾಣ ಶಿಬಿರದಲ್ಲಿ ಶಾಸಕ ಬಿ.ಆರ್. ಪಾಟೀಲ ಮಾಸಾಶನ ಮಂಜೂರಾತಿ ಪತ್ರ ವಿತರಿಸಿದರು
ಆಳಂದ ತಾಲ್ಲೂಕಿನ ಕೊರಳ್ಳಿ ಗ್ರಾಮದಲ್ಲಿ ನಡೆದ ಜನಸ್ಪಂದನ ಮತ್ತು ಆರೋಗ್ಯ ಕಲ್ಯಾಣ ಶಿಬಿರದಲ್ಲಿ ಶಾಸಕ ಬಿ.ಆರ್. ಪಾಟೀಲ ಮಾಸಾಶನ ಮಂಜೂರಾತಿ ಪತ್ರ ವಿತರಿಸಿದರು   

ಆಳಂದ: ಪ್ರಸಕ್ತ ವರ್ಷದ‌ನಲ್ಲಿ ಭೀಮಾ ನದಿಯ ಹೆಚ್ಚುವರಿ ನೀರು ತಂದು ಅಮರ್ಜಾಜಲಾಶಯ ಭರ್ತಿ ಕಾರ್ಯಕ್ಕೆ ₹ 500 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.ತಾಲ್ಲೂಕಿನ ಕೊರಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ನಡೆದ ಕಂದಾಯ ಇಲಾಖೆಯ ಜನಸ್ಪಂದನ ಮತ್ತು ಆರೋಗ್ಯ ಕಲ್ಯಾಣ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾದ 25 ಸಾವಿರ ಜನರಿದ್ದಾರೆ. ದಲ್ಲಾಲಿಗಳ ಉಪಟಳ, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷದಿಂದ ಸೌಲಭ್ಯ ಲಭಿಸಿದ ಜನರ ಬಳಿಗೆ ಹೋಗಿ ಸಮರ್ಪಕ ಸೌಲಭ್ಯಗಳನ್ನು ವಿತರಿಸುವಲ್ಲಿ ಆರೋಗ್ಯ ಶಿಬಿರ ಯಶಸ್ವಿಯಾಗಿದೆ ಎಂದರು.

ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಮಾತನಾಡಿ, ಸರ್ಕಾರ ಅಂಗವಿಕಲರು, ವಿಧವೆಯರು, ವೃದ್ಧರು ಮತ್ತಿತರ ಅಸಹಾಯಕರ ಬದುಕಿಗೆ ಭದ್ರತೆ, ನೆರವು            ನೀಡಲು ವಿವಿಧ ಸೌಲಭ್ಯಗಳನ್ನು ಜಾರಿಗೊಳಿಸಿದೆ.ಶಾಸಕರ ನೇತೃತ್ವದಲ್ಲಿ 23 ಗ್ರಾಪಂ ವ್ಯಾಪ್ತಿಯಲ್ಲಿ ಶಿಬಿರ ನಡೆಸಿ ಅಂದಾಜು 14 ಸಾವಿರ ಜನರಿಗೆ ಈಗಾಗಲೇ ಸೌಲಭ್ಯ ತಲುಪಿದೆ ಎಂದರು.

ADVERTISEMENT

ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಗುರುಶರಣ ಪಾಟೀಲ ಮಾತನಾಡಿ, ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿದೆ. ಅಮರ್ಜಾ ನದಿಗೆ ನೀರು ಭರ್ತಿ ಮಾಡುವ ಕಾರ್ಯದಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಅಂಗವಿಕಲರ ಇಲಾಖೆ ಜಿಲ್ಲಾ ಅಧಿಕಾರಿ ಬನ್ಸಿ ಪವಾರ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಗುರುಬಾಯಿ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಂಜಯ ರೆಡ್ಡಿ, ಬಿ.ಕೆ. ಪಾಟೀಲ, ಜೆಇಇ ವಿಶ್ವನಾಥ ರೆಡ್ಡಿ, ಉಪ ತಹಶೀಲ್ದಾರ್ ಶಾಂತಕುಮಾರ, ಡಾ.ಅಭಿನಂದನ ಬೇಡಗೆ, ಜೆ.ಕೆ. ಅನ್ಸಾರಿ, ಬಾಬು ಪವಾರ, ಬಸವರಾಜ ಚೌಲ, ಚಂದ್ರಕಾಂತ ಪಾಟೀಲ, ಅಮೃತರಾವ ಪಾಟೀಲ, ಸಂಜಯ ಪಾಟೀಲ ಇದ್ದರು.ಕೊರಳ್ಳಿ, ಸಂಗೋಳಗಿ ಮತ್ತು ಸುತ್ತಲಿನ ತಾಂಡಾಗಳ ಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.