ADVERTISEMENT

‘ಉದ್ಯೋಗ ಚೀಟಿಯಿದೆ, ಉದ್ಯೋಗ ಇಲ್ಲ’

ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ, ಗ್ರಾಮಸ್ಥರಿಗೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 4:33 IST
Last Updated 22 ಏಪ್ರಿಲ್ 2017, 4:33 IST
ಕಲಬುರ್ಗಿ: ಚಿಂಚೋಳಿ ತಾಲ್ಲೂಕಿನ ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋನಸ್‍ಪುರ ಮತ್ತು ಲಿಂಗಾನಗರ ಗ್ರಾಮಗಳ ಬಳಿ ಶುಕ್ರವಾರ ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಯೋಜನೆ ಸದ್ಬಳಕೆ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. 
 
ಕಾಮಗಾರಿಗೆ ಚಾಲನೆ ನೀಡಿದ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ‘ಗಡಿ ಪ್ರದೇಶ ವೆಂಕಟಾಪುರದ ಗ್ರಾಮಸ್ಥರು ಉದ್ಯೋಗ ಚೀಟಿ ಹೊಂದಿದ್ದರೂ ಉದ್ಯೋಗದಿಂದ ವಂಚಿತರಾಗಿದ್ದಾರೆ. ಸರಿಯಾದ ಕೂಲಿ ಸಿಗದೇ ಗ್ರಾಮಸ್ಥರು ಕಂಗಾಲು ಆಗಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದ್ದಾರೆ’ ಎಂದು ವಿಷಾದಿಸಿದರು.  
 
‘ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕನಿಷ್ಠ ನೂರು ದಿನದ ಕೆಲಸ ನೀಡಬೇಕು. ತೆಲಂಗಾಣ ರಾಜ್ಯದಲ್ಲಿ ಕೆಲಸದ ಕೂಲಿಯನ್ನು ಒಂದೇ ವಾರದಲ್ಲಿ ನೀಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಅದು ವಿಳಂಬ ಆಗುತ್ತಿದೆ. ಇದರಿಂದ ಗ್ರಾಮಸ್ಥರು ಉದ್ಯೋಗ ಖಾತರಿ ಯೋಜನೆ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ’ ಎಂದರು. 
 
‘ಗ್ರಾಮಸ್ಥರು ಮಾಡುವ ಕೆಲಸಕ್ಕೆ ಅನುಗುಣವಾಗಿ ಸಕಾಲಕ್ಕೆ ಕೂಲಿ ನೀಡಬೇಕು. ಎಲ್ಲ ರೀತಿಯ ತಾಂತ್ರಿಕ ವ್ಯವಸ್ಥೆ ಪೂರೈಸುವ ಹೊಣೆ ಗ್ರಾಮ ಪಂಚಾಯಿತಿ ವಹಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು. 
 
‘ಸುಮಾರು 15 ಎಕರೆಯಷ್ಟು ವಿಶಾಲವಾದ ಕೆರೆ ಪ್ರದೇಶದಲ್ಲಿ ಸಾವಿರಾರು ಜನರು ಕೆಲಸ ಮಾಡಲು ಅವಕಾಶವಿದೆ. ಕೆರೆಯ ಹೂಳೆತ್ತಿದ್ದರೆ ಮಳೆಗಾಲದಲ್ಲಿ ನೀರು ಶೇಖರಣೆಯಾಗುತ್ತದೆ. ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಜನರು ಉದ್ಯೋಗ ಹುಡುಕುತ್ತ ವಲಸೆ ಹೋಗುವುದು ತಪ್ಪಿಸಬಹುದು’ ಎಂದರು. 
 
ಡಾ.ಮೀನಾಕ್ಷಿ ಬಾಳಿ ಮಾತನಾಡಿ,‘ಬಹುತೇಕ ಜನರ ಬಳಿ ಉದ್ಯೋಗ ಚೀಟಿಗಳಿವೆ. ಆದರೆ ಉದ್ಯೋಗ ಇಲ್ಲ. ಜನರು ಆತಂಕದಲ್ಲಿ ಇದ್ದಾರೆ. ಜನರಲ್ಲಿರುವ ಭಯ ಹೋಗಲಾಡಿಸಬೇಕು. ಅವರು ಕೆಲಸಕ್ಕೆ ಬರುವಂತಾಗಬೇಕು’ ಎಂದರು. 
 
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಪಿಡಿಒ ಜಗನ್ನಾಥ ಬಾಗೋಡಿ, ತಾಂತ್ರಿಕ ಸಹಾಯಕ ಶ್ರೀಕಾಂತ, ಡಾ. ಪ್ರಭು ಖಾನಾಪುರೆ, ನಂದಾದೇವಿ ಮಂಗೊಂಡಿ, ನಿಂಗಪ್ಪ ಮಂಗೊಂಡಿ, ಅಶ್ವಿನಿ ಮದನಕರ್, ಕ್ಷೇತ್ರ ಸಹಾಯಕ ಚಂದ್ರಶೇಖರ್, ಕಂಪ್ಯೂಟರ್ ಆಪರೇಟರ್ ಜಗನ್ನಾಥ, ಬಿಲ್ ಕಲೆಕ್ಟರ್ ಮೋಹನ್ ಪವಾರ್, ಜನವಾದಿ ಮಹಿಳಾ ಸಂಘಟನೆ ಕಾರ್ಯದರ್ಶಿ ರೇಷ್ಮಾ ಕುಂದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.