ADVERTISEMENT

ಗುರೂಜಿ ಜನ್ಮ ಶತಮಾನೋತ್ಸವ 20ರಂದು

ಅಣ್ಣಾ ಹಜಾರೆ ಆಗಮನ, ಪುಸ್ತಕ ತುಲಾಭಾರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಗುಲ್ಬರ್ಗ: ಹಿರಿಯ ಸ್ವಾತಂತ್ರ ಹೋರಾಟಗಾರ, ಮಾಜಿ ಶಾಸಕ ವಿದ್ಯಾಧರ ಗುರೂಜಿ ಜನ್ಮ ಶತಮಾನೋತ್ಸವ ಜ. 20ರಂದು ಬೆಳಗ್ಗೆ 11ಗಂಟೆಗೆ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಸವರಾಜಪ್ಪ ಅಪ್ಪ ಮತ್ತು ಕೋಶಾಧ್ಯಕ್ಷ ನಾಗಣ್ಣ ಗಣಜಲಖೇಡ ಜಂಟಿಯಾಗಿ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ನಡುವೆ ನೂರು ವರ್ಷದ ತುಂಬು ಜೀವನ ನಡೆಸಿದ ಪ್ರಯುಕ್ತ ವಿದ್ಯಾಧರ ಗುರೂಜಿ ಅವರನ್ನು ವೀರಸಾವರ್‌ಕರ್ ಜೀವನ ಚರಿತ್ರೆಯ ಗ್ರಂಥಗಳಿಂದ ತುಲಾಭಾರ ಮಾಡಲಾಗುವುದು ಎಂದರು.

ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ದೆೀಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಪ್ಪ ಅವರ ಅಧ್ಯಕ್ಷತೆಯಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರ ನಾಯಕ ಅಣ್ಣಾ ಹಜಾರೆ, ಶಹೀದ್ ಭಗತ್‌ಸಿಂಗ್‌ರ ಸಹೋದರ ಪುತ್ರ ಕಿರಣಜಿತ್ ಸಿಂಗ್, ವೀರಸಾವರಕರ ಸೊಸೆ ಹಿಮಾನಿ ಸಾವರ್‌ಕರ್, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಸೇರಿದಂತೆ ಜಿಲ್ಲೆಯ ರಾಜಕೀಯ ಧುರೀಣರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಡಾ.ಬಾಬು ಕೃಷ್ಣಮೂರ್ತಿ ಕನ್ನಡಕ್ಕೆ ಅನುವಾದಿಸಿದ `ಯುಗದೃಷ್ಟಾರ ಭಗತ್‌ಸಿಂಗ್, ಮಕ್ಕಳ ಕವಿ ಎ.ಕೆ.ರಾಮೇಶ್ವರ ರಚಿಸಿದ ವಿದ್ಯಾಧರ ಗುರೂಜಿ ಜೀವನ ಚರಿತ್ರೆ ಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕಾಣಿಕೆ, ಪುಷ್ಪಹಾರ, ಶಾಲು ತರುವಂತಿಲ್ಲ. ಗೌರವಪೂರ್ವಕವಾಗಿ ಒಂದು ಪುಸ್ತಕ ಕೊಡಬಹುದು. ಶ್ರೀಗುರು ವಿದ್ಯಾಪೀಠದ ವತಿಯಿಂದ ಊಟದ ವ್ಯವಸ್ಥೆ  ಮಾಡಲಾಗಿದೆ ಎಂದರು. ಲಿಂಗರಾಜಪ್ಪ ಅಪ್ಪ, ಅಶೋಕ ಗುರೂಜಿ, ತಿವಾರಿ, ಉಮೇಶ ಶೆಟ್ಟಿ, ಮಚ್ಛೇಂದ್ರನಾಥ ಮೂಲಗೆ, ಜಂಬಣ್ಣಗೌಡ ಶೀಲವಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.