ಕಲಬುರ್ಗಿ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸಚಿವ ಸಂಪುಟದ ನಿರ್ಣಯವನ್ನು ಸ್ವಾಗತಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಸದಸ್ಯರು ಸೋಮವಾರ ವಿಜಯೋತ್ಸವ ಆಚರಿಸಿದರು. ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
‘ಭಾರತ ದೇಶ ಜೈ ಬಸವೇಶ’, ‘ಒಬ್ಬ ಲಿಂಗಾಯತ; ಕೋಟಿ ಲಿಂಗಾಯತ’, ‘ನಾವು ಹಿಂದೂಗಳಲ್ಲ; ನಾವು ಲಿಂಗಾಯತರು’, ‘ಲಿಂಗಾಯತ ವ್ಯಕ್ತಿ; ದೇಶಕ್ಕೊಂದು ಶಕ್ತಿ’ ಎಂಬ ಜಯಘೋಷಗಳನ್ನು ಕೂಗಿದರು.
ಬಳಿಕ ಮೆರವಣಿಗೆ ಹೊರಟು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ತಲುಪಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ, ಡಾ. ಶರಣಪ್ರಕಾಶ ಪಾಟೀಲ ಮತ್ತು ವಿನಯ ಕುಲಕರ್ಣಿ ಪರ ಘೋಷಣೆ ಕೂಗಿದರು. ಸರ್ಕಾರದ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಪ್ರಧಾನ ಕಾರ್ಯದರ್ಶಿ ಆರ್.ಜಿ.ಶೆಟಗಾರ, ಪ್ರಭುಶ್ರೀ ಮಾತಾಜಿ, ಮುಖಂಡರಾದ ಕುಪೇಂದ್ರ ಪಾಟೀಲ, ಅಯ್ಯಣ್ಣ ನಂದಿ, ಪರಮೇಶ್ವರ ಶೆಟಗಾರ, ನಾಗರಾಜ ನಿಂಬರ್ಗಿ, ಸಿದ್ದರಾಮ ಯಳವಂತಗಿ, ವೀರಣ್ಣ ರೊಡ್ಡನ, ಕಲ್ಯಾಣಕುಮಾರ, ಚಂದ್ರಶೇಖರ ಮಲ್ಲಾಬಾದಿ, ಸೋಮಣ್ಣ ನಡಕಟ್ಟಿ, ಮಲ್ಲಿಕಾರ್ಜುನ ಬಗಲಿ, ಅಯ್ಯನಗೌಡ ಪಾಟೀಲ, ಅಶೋಕ ಆರ್.ಹೂಗಾರ, ವಿಲಾಸವತಿ ಖೂಬಾ, ನೀಲಾ ಕೆ., ಮೀನಾಕ್ಷಿ ಬಾಳಿ, ಕಮಲಮ್ಮ ಶಾಬಾದಿ, ನಳಿನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.