ADVERTISEMENT

ದಲಿತರಿಗೆ ನಿರುಪಯುಕ್ತ ಭೂಮಿ ಹಂಚಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 7:11 IST
Last Updated 13 ಸೆಪ್ಟೆಂಬರ್ 2017, 7:11 IST

ವಾಡಿ: ರಾವೂರು ಗ್ರಾಮ ಪಂಚಾಯಿತಿ ಆಡಳಿತವು, ಭೂ ಒಡೆತನ ಹಕ್ಕು ಕಾಯ್ದೆಯಡಿ ದಲಿತರಿಗೆ ನಿರುಪಯುಕ್ತ ಭೂಮಿ ಹಂಚುತ್ತಿದೆ. ಆದುದರಿಂದ ಭೂಮಿ ಖರೀದಿ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಿ ಉತ್ತಮ ಗುಣಮಟ್ಟದ ಭೂಮಿಗಳನ್ನು ಖರೀದಿಸಿ ದಲಿತರಿಗೆ ಹಂಚಬೇಕು ಎಂದು ರೈತ ಮುಖಂಡ ರಾಘವೇಂದ್ರ ಸಗರ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಅತಿ ಕಡಿಮೆ ಬೆಲೆಯ ನಿರುಪಯುಕ್ತ ಬಂಜರು ಭೂಮಿಯನ್ನು ಅಗ್ಗದ ದರದಲ್ಲಿ ಖರೀದಿಸಿ ಅದನ್ನು ಬಡ ದಲಿತರಿಗೆ ವಿತರಿಸಲಾಗುತ್ತಿದೆ. ರಾವೂರು ಗ್ರಾ.ಪಂ ವ್ಯಾಪ್ತಿಯ ಗಾಂಧಿನಗರದ ಸರ್ವೇ ನಂ. 88ರಲ್ಲಿನ ವಿಶ್ವನಾಥ ತುಮಕೂರು ಅವರಿಗೆ ಸೇರಿದ ಬಂಜರು ಭೂಮಿಯನ್ನು ಮಾರುಕಟ್ಟೆ ಮೌಲ್ಯಕ್ಕಿಂತಲೂ ಅಧಿಕ ಹಣ ನೀಡಿ ಖರೀದಿಸಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

‘ಗ್ರಾ.ಪಂ ಅಧ್ಯಕ್ಷ ವೆಂಕಟೇಶ ಕಟ್ಟಿಮನಿ, ಪಿಡಿಒ ಕಾವೇರಿ ರಾಠೋಡ್ ಅವರು, ನಿರುಪಯುಕ್ತ ಜಮೀನನ್ನು ಖರೀದಿಸಿ ದಲಿತರಿಗೆ ಹಂಚುವ ಯೋಚನೆ ರೂಪಿಸಿದ್ದು, ಇದರಲ್ಲಿ ಅವ್ಯವಹಾರದ ಶಂಕೆ ಕಂಡುಬರುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಅರ್ಹ ಬಡ ದಲಿತರನ್ನು ಗುರುತಿಸಿ ಭೂಮಿ ಹಂಚುವ ಉದ್ದೇಶ ಒಳ್ಳೆಯದು. ಆದರೆ, ನಿರುಪಯುಕ್ತ ಬಂಜರು ಭೂಮಿಯನ್ನು ಹಂಚುವುದು ಯಾವ ನ್ಯಾಯ? ಎಂದ ಅವರು, ಈಗಾಗಲೇ ಗ್ರಾಮದಲ್ಲಿ ಸಾಕಷ್ಟು ಕೃಷಿಯೋಗ್ಯ ಉತ್ತಮ ಭೂಮಿಗಳು ಮಾರಾಟಕ್ಕಿವೆ. ಅವುಗಳನ್ನು ಖರೀದಿಸಿ ದಲಿತರಿಗೆ ಹಂಚಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭೂಮಿ ಹಂಚಿಕೆಯಲ್ಲಿ ಸಮಾನವಾಗಿ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.