ADVERTISEMENT

ಪರಿಸರ ಸ್ನೇಹಿ ಹಸರಗುಂಡಗಿ ಶಾಲೆ

ಬಡ ಮಕ್ಕಳಿಗೆ ವರದಾನ, ಸರ್ಕಾರಿ ಯೋಜನೆ ಸದ್ಬಳಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 9:40 IST
Last Updated 15 ಫೆಬ್ರುವರಿ 2017, 9:40 IST
ಅಫಜಲಪುರ ತಾಲ್ಲೂಕಿನ ಹಸರಗುಂಡಗಿ ಸರ್ಕಾರಿ ಪ್ರೌಢಶಾಲೆ ಹಸಿರಿನಿಂದ ಕಂಗೊಳಿಸುತ್ತಿರುವುದು
ಅಫಜಲಪುರ ತಾಲ್ಲೂಕಿನ ಹಸರಗುಂಡಗಿ ಸರ್ಕಾರಿ ಪ್ರೌಢಶಾಲೆ ಹಸಿರಿನಿಂದ ಕಂಗೊಳಿಸುತ್ತಿರುವುದು   

ಅಫಜಲಪುರ: ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ ಅಂತರದಲ್ಲಿರುವ ಹಸರಗುಂಡಗಿ ಸರ್ಕಾರಿ ಪ್ರೌಢಶಾಲೆ ಶಾಲೆ ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಬಡ ಮಕ್ಕಳಿಗೆ ವರದಾನವಾಗಿದೆ.

2016–17ರಲ್ಲಿ ಆರಂಭಗೊಂಡ ಈ ಸರ್ಕಾರಿ ಶಾಲೆ ಇಲ್ಲಿಯ ಮಕ್ಕಳ ಸಂಖ್ಯೆ 128ಇದ್ದು, 7 ಶಿಕ್ಷಕರಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದೆ.

ಮಕ್ಕಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕಾಗಿ ವಿಷಯ ಆಧಾರಿತ ರಸಪ್ರಶ್ನೆ ಕಾರ್ಯಕ್ರಮ, ಮಾಹಿತಿ ತಂತ್ರಜ್ಞಾನ ಉಪನ್ಯಾಸ ಕಾರ್ಯಕ್ರಮ, ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗುತ್ತದೆ. ದಿನಕ್ಕೊಂದು ಪ್ರಶ್ನೆ ಮತ್ತು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸರಣಿ ಪರೀಕ್ಷೆ, ಕಂಪ್ಯೂಟರ್‌ ಆಧಾರಿತ ಕಲಿಕೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ವರ್ಗಗಳು ಈ 10 ಹಲವಾರು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಶಾಲೆಯಲ್ಲಿ ಅಂಗಳ ಪ್ರವೇಶಿಸಿದರೆ, ಯಾವುದು ಒಂದು ಉದ್ಯಾನದಂತೆ  ಭಾಸವಾಗುತ್ತದೆ. ಇಲ್ಲಿಯ ಶಿಕ್ಷಕರು ಸುಮಾರು 500 ಸಸಿಗಳನ್ನು ನೆಟ್ಟಿದ್ದಾರೆ ಮತ್ತು ಬಿಸಿಯೂಟಕ್ಕೆ ಬೇಕಾದ ಕಾಯಿಪಲ್ಲೆಗಳ ಕೈ ತೋಟ ಮಾಡಿಕೊಂಡಿದ್ದಾರೆ. ಶಾಲೆಗೆ ಗ್ರಾಮದ ಸುತ್ತಮುತ್ತಲಿನ ಸಂಗಾಪುರ, ಕೆಕ್ಕರ ಸಾವಳಗಿ, ಚಿನ್ಮಳ್ಳಿ, ಕಿರಸಾವಳಗಿ, ಶಿರಸಗಿ, ಮೈನಾಳ ಗ್ರಾಮದಿಂದ ಮಕ್ಕಳು ಸೈಕಲ್‌ ಮೇಲೆ ಬಂದು ಹೋಗುತ್ತಾರೆ.

ದಾಖಲೆ ಸಂಗ್ರಹ:  ಪ್ರತಿ ವಿದ್ಯಾರ್ಥಿಗಳ ಪ್ರಗತಿ ವರದಿ ಕುರಿತು ಅವರು ಮಾಡಿರುವ ಶೈಕ್ಷಣಿಕ ಕಾರ್ಯಗಳ ಬಗ್ಗೆ ಪ್ರತ್ಯೇಕ ದಾಖಲೆಗಳನ್ನು ಸಂಗ್ರಹ ಮಾಡಿ ಪ್ರತ್ಯೇಕವಾಗಿ ಪ್ರತಿ ವಿದ್ಯಾರ್ಥಿಗೊಂದು ಕಡತ  ತೆರೆಯಲಾಗಿದೆ. ಹೀಗಾಗಿ ಯಾವ ಮಕ್ಕಳು ಎಷ್ಟು ಪ್ರಗತಿ ಸಾಧಿಸಿದ್ದಾರೆ? ಯಾವ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದೆ ಉಳಿದಿದ್ದಾರೆ ಎಂಬುದನ್ನು ಈ ಮೂಲಕ ಅಳೆಯಲಾಗುತ್ತದೆ.

ಶಾಲೆಗೆ ಈಚೆಗೆ ಭೇಟಿ ಕೊಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿಯವರು ಮಕ್ಕಳ ಪ್ರಗತಿ ವರದಿ ಪರಿಶೀಲನೆ ಮಾಡಿ ಶಿಕ್ಷಕರ ಕೆಲಸಕ್ಕೆ ಪ್ರಶಂಸಿಸಿದ್ದಾರೆ. ಪ್ರತಿ ವರ್ಷವೂ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಫೆಬ್ರುವರಿ ತಿಂಗಳಲ್ಲಿ ಸರಣಿ ಪರೀಕ್ಷೆಯನ್ನು ಏರ್ಪಡಿಸಿದ್ದಾರೆ. ಆದರೆ ಶಾಲೆಯಲ್ಲಿಯೇ ಪರೀಕ್ಷೆ ತೆಗೆದುಕೊಂಡು ಅವತ್ತೇ ಮೌಲ್ಯಮಾಪನ ಮಾಡಿ ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಪ್ರತಿ ವಿಷಯದಲ್ಲಿಯೂ ಸರಣಿ ಪರೀಕ್ಷೆ ನಡೆಯುತ್ತದೆ.

ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಬೀದಿ ನಾಟಕ ಹಮ್ಮಿಕೊಂಡು ಶೌಚಾಲಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಶೈಕ್ಷಣಿಕ ಮತ್ತು ಸಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತದೆ ಎಂದು ಇಲ್ಲಿಯ ಮುಖ್ಯ ಶಿಕ್ಷಕ ವೀರಣ್ಣ ಸಜ್ಜನ ಹೇಳುತ್ತಾರೆ.
- ಶಿವಾನಂದ ಹಸರಗುಂಡಗಿ

* ಹಸರಗುಂಡಗಿ ಸರ್ಕಾರಿ ಪ್ರೌಢಶಾಲೆ  ಸುತ್ತಲಿನ 7– 8 ಹಳ್ಳಿಗಳ ಬಡ ಮಕ್ಕಳಿಗೆ ವರದಾನವಾಗಿದೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಸತ್ಪ್ರಜೆಯಾಗಿ ರೂಪಿಸಲು ನಾವೆಲ್ಲರೂ ಪ್ರಯತ್ನ ಮಾಡುತ್ತಿದ್ದೇವೆ.
ವೀರಣ್ಣ ಸಜ್ಜನ,ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT