ADVERTISEMENT

ಬೇಸಿಗೆಯಲ್ಲೂ ಬತ್ತದ ಪಂಚಲಿಂಗೇಶ್ವರ ಬುಗ್ಗೆ

ಪ್ರವಾಸಿಗರ ಆಕರ್ಷಣೆ ತಾಣ: ಅಭಿವೃದ್ಧಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಮೇ 2018, 9:49 IST
Last Updated 27 ಮೇ 2018, 9:49 IST
ಚಿಂಚೋಳಿ ಹೊರವಲಯದ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಯಲ್ಲಿ ಉಕ್ಕುತ್ತಿರುವ ನೀರು
ಚಿಂಚೋಳಿ ಹೊರವಲಯದ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಯಲ್ಲಿ ಉಕ್ಕುತ್ತಿರುವ ನೀರು   

ಚಿಂಚೋಳಿ: ಪಟ್ಟಣದ ಹೊರವಲಯದ ಮುಲ್ಲಾಮಾರಿ ನದಿ ದಂಡೆಯಲ್ಲಿರುವ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆ ಪ್ರವಾಸಿಗರ ತಾಣವಾಗಿದೆ.

ಇಲ್ಲಿ ಉಕ್ಕುವ ನೀರು ಬಿರು ಬೇಸಿಗೆಯ ಕೊನೆಯ ದಿನಗಳಾದ ಮೇ ತಿಂಗಳಲ್ಲೂ ಬತ್ತದಿರುವುದು ಅಚ್ಚರಿಗೆ ಕಾರಣವಾಗಿದೆ. ಎರಡು ಬುಗ್ಗೆಯ ತೊಟ್ಟಿಗಳಿವೆ. ಒಂದರಲ್ಲಿ ಜನರು ಸ್ನಾನ ಮಾಡಿದರೆ, ಇನ್ನೊಂದರಲ್ಲಿ ಐದು ಶಿವಲಿಂಗಗಳನ್ನು ವಿವಿಧ ಎತ್ತರದಲ್ಲಿ ಸ್ಥಾಪಿಸಲಾಗಿದ್ದು ಇಲ್ಲಿಯೂ ನೀರು ಹರಿಯುತ್ತಿದೆ.

ಶಿವಲಿಂಗಗಳನ್ನು ಹೊಂದಿರುವ ತೊಟ್ಟಿಯಲ್ಲಿರುವ ಬುಗ್ಗೆಯ ನೀರು ಜನರು ಇಷ್ಟಪಟ್ಟು ಸೇವಿಸುತ್ತಾರೆ. ಪಕ್ಕದ ತೊಟ್ಟಿಯ ನೀರಿನಲ್ಲಿ ಮಕ್ಕಳು, ಯುವಕರು ಸ್ನಾನ ಮಾಡುತ್ತಾರೆ. ಬಿರು ಬೇಸಿಗೆಯಲ್ಲಿ ಜನರ ದಾಹ ನೀಗಿಸುವುದರ ಜತೆಗೆ ದೇಹವನ್ನು ಬಿಸಿಲಿನ ಬೇಗೆಯಿಂದ ತಣಿಸುವ ತಂಪನೆಯ ತಾಣದಲ್ಲಿ ಹಗಲಿನಲ್ಲಿ ಸದಾಕಾಲ ಜನರು ಸ್ನಾನ ಮಾಡುತ್ತಿರುವುದು ಗೋಚರಿಸುತ್ತದೆ.

ADVERTISEMENT

ಅರಳೆ ಮರದ ಎದುರು ಶಿವಲಿಂಗ ಮತ್ತು ಕಟ್ಟೆ ನಿರ್ಮಿಸಿ ಅಭಿವೃದ್ಧಿಪಡಿಸಿದ್ದು ಅದರ ಎದುರುಗಡೆ ಮತ್ತೊಂದು ಅರಳೆ ಮರ ಬೆಳೆದು ನಿಂತಿರುವುದು ಈ ತಾಣದ ಶೋಭೆ ಹೆಚ್ಚಿಸಿವೆ. ಬಿಸಿಲಿನ ದಿನಗಳಲ್ಲೂ ಈ ತಾಣದಲ್ಲಿ ನೀರು ಹರಿಯುತ್ತಿದೆ. ಶಿವಲಿಂಗಗಳ ತೊಟ್ಟಿಯಲ್ಲಿ ನೀರು ಬತ್ತಿಲ್ಲ. ಆದರೆ ಪ್ರಸಕ್ತ ವರ್ಷ ಅದು ಬತ್ತಿಲ್ಲ. ಇದರಿಂದ ಎರಡು ಬುಗ್ಗೆಯಲ್ಲೂ ನೀರು ಉತ್ತಮ ಪ್ರಮಾಣದಲ್ಲಿ ಹರಿಯುತ್ತಿವೆ ಎನ್ನುತ್ತಾರೆ ಶಿವಕುಮಾರ ಗುಡಪಳ್ಳಿ ಮತ್ತು ಮಸ್ತಾನ ನದಾಫ್‌.

ಈ ಪುಣ್ಯ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾಡಬೇಕು. ಈ ಮೂಲಕ ಪ್ರವಾಸೋದ್ಯಮ ಉತ್ತೇಜಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಶಿವಲಿಂಗಗಳ ಮಧ್ಯ ಪೂರ್ಣ ಪ್ರಮಾಣದಲ್ಲಿ ಪಾಚಿ ಬೆಳೆದಿದ್ದು ನೀರಿನೊಳಗಡೆ ಕಾಲಿಟ್ಟರೆ ಜಾರಿ ಬೀಳುವಂತಾಗಿದೆ. ಪುರಸಭೆ ಇದನ್ನು ಸರಿಪಡಿಸಬೇಕು ಎಂಬುದು  ಪ್ರವಾಸಿಗರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.