ವಾಡಿ: ಪಟ್ಟಣದಿಂದ ಬಳವಡ್ಗಿ ಗ್ರಾಮದವರೆಗೆ ನಿರ್ಮಿಸಲಾದ ಡಾಂಬರು ರಸ್ತೆ ನಿರ್ಮಾಣಗೊಂಡ ಒಂದೇ ವರ್ಷದಲ್ಲಿ ಕಿತ್ತು ಹೋಗಿದ್ದು, ಸಂಪೂರ್ಣ ಕಳಪೆ ಕಾಮಗಾರಿಗೆ ನಿದರ್ಶನ ಎನ್ನುವಂತಿದೆ.
ಪಟ್ಟಣದಿಂದ 6 ಕಿ.ಮೀ ದೂರದ ಬಳವಡ್ಗಿ ಗ್ರಾಮಕ್ಕೆ ಒಳ್ಳೆಯ ಗುಣಮಟ್ಟದ ರಸ್ತೆ ನಿರ್ಮಾಣವಾಗಿ ಸಂಕಟದ ಸಂಚಾರಕ್ಕೆ ಮುಕ್ತಿ ಸಿಗಲಿದೆ ಎಂದು ಭಾವಿಸಿದ್ದ ಸ್ಥಳೀಯರಿಗೆ ಕಳಪೆ ಗುಣಮಟ್ಟದ ಡಾಂಬಾರು ರಸ್ತೆ ಶಾಪವಾಗಿ ಪರಿಣಮಿಸಿದೆ.
ನಾಲವಾರದಿಂದ ಬಳವಡ್ಗಿ ಗ್ರಾಮದ ಮೂಲಕ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ₹2.58 ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದರು. ಆದರೆ, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅಪವಿತ್ರ ಮೈತ್ರಿಯಿಂದಾಗಿ ಡಾಂಬರು ರಸ್ತೆ ನಿರ್ಮಾಣವಾದ ಒಂದೇ ವರ್ಷದಲ್ಲಿ ಕಿತ್ತು ಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕಾಗಿದ್ದ ಗುತ್ತಿಗೆದಾರರು, ಬೇಕಾಬಿಟ್ಟಿ ಕಾಮಗಾರಿ ಕೈಗೊಂಡ ಪರಿಣಾಮ ರಸ್ತೆಯ ಮೇಲೆ ತಗ್ಗು ದಿಣ್ಣೆಗಳು ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
2014-15ನೇ ಸಾಲಿನ ಹೈದ್ರಾಬಾದ್ ಕನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅನುದಾನ ಯೋಜನೆಯಡಿ ಮಂಜೂರಾದ ರಸ್ತೆಯನ್ನು 2016ರ ಏಪ್ರಿಲ್ನಲ್ಲಿ ಪ್ರಾರಂಭಿಸಿ, 2017 ಫೆಬ್ರುವರಿ ತಿಂಗಳಿನಲ್ಲಿ ಪೂರ್ಣಗೊಳಿಸಲಾಯಿತು. ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಎನ್ನುವುದು ಸ್ಥಳೀಯರ ಬಹುದಿನದ ಬೇಡಿಕೆಯಾಗಿತ್ತು.
ಆದರೆ, ಕಳಪೆ ಕಾಮಗಾರಿಯಿಂದ ಸ್ಥಳೀಯರ ಕನಸು ನುಚ್ಚು ನೂರಾಗಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸುವ ಸ್ಥಳೀಯರು, ಕಳಪೆ ರಸ್ತೆಗೆ ಕಾರಣರಾದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಿದ್ದರಾಜ ಎಸ್.ಮಲಕಂಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.