ADVERTISEMENT

ಸುರಪುರ, ಮೈಸೂರು ಚಿತ್ರಕಲೆ ಪೂರಕ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:45 IST
Last Updated 19 ಜನವರಿ 2017, 5:45 IST
ಸುರಪುರ, ಮೈಸೂರು ಚಿತ್ರಕಲೆ ಪೂರಕ
ಸುರಪುರ, ಮೈಸೂರು ಚಿತ್ರಕಲೆ ಪೂರಕ   

ಕಲಬುರ್ಗಿ: ‘ಸುರಪುರ ಮತ್ತು ಮೈಸೂರು ಸಾಂಪ್ರದಾಯಿಕ ಕಲೆಗಳು ಭಿನ್ನವಾಗಿದ್ದರೂ ಒಂದಕ್ಕೊಂದು ಪೂರಕವಾಗಿವೆ’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜಿ. ಕಮಲಾಕ್ಷಿ ಹೇಳಿದರು.

ನಗರದ ಮಾತೋಶ್ರೀ ನೀಲಗಂಗಮ್ಮ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ದಿ ಐಡಿಯಲ್ ಫೈನ್ ಆರ್ಟ್‌ ಸಂಸ್ಥೆ ಆಶ್ರಯದಲ್ಲಿ ಬುಧವಾರ ಆರಂಭವಾದ ‘ಸುರಪುರ ಮತ್ತು ಮೈಸೂರು ಸಾಂಪ್ರದಾಯಿಕ ಶಿಬಿರ ಹಾಗೂ ವಿಚಾರ ಸಂಕಿರಣ’ದಲ್ಲಿ ಅವರು ಮಾತನಾಡಿದರು.

‘ಭಾರತೀಯ ಚಿತ್ರಕಲೆ ಎಂದಾಕ್ಷಣ ಬಹುತೇಕರು ಉತ್ತರ ಭಾರತ ಶೈಲಿಯ ಬಗ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮೈಸೂರು, ಸುರಪುರ ಸಾಂಪ್ರದಾಯಿಕ ಶೈಲಿಯ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಹೀಗಾಗಿ ಈ ಎರಡು ಕಲೆಗಳ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಂಡಿರುವುದು ಶ್ಲಾಘನೀಯ. 15 ಕಲಾವಿದರು ಶಿಬಿರದಲ್ಲಿ ಭಾಗವಹಿಸಿರುವುದರಿಂದ ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ದೊರಕಲಿದೆ’ ಎಂದು ಹೇಳಿದರು.

ಹಿರಿಯ ಕಲಾವಿದ ಬಸವರಾಜ ಉಪ್ಪಿನ ಮಾತನಾಡಿ, ‘ಸುರಪುರದ ಗರುಡಾದ್ರಿ ಶೈಲಿ, ಸಾಂಪ್ರದಾಯಿಕ ಶೈಲಿ ಕಲಾಪ್ರಕಾರ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಸುರಪುರ ಶೈಲಿಯ ಕಲೆ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಅದೇ ರೀತಿ ತಂಜಾವೂರು ಕಲೆಯ ಬಗ್ಗೆಯೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ’ ಎಂದು ತಿಳಿಸಿದರು.

ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆಯ ಕಾರ್ಯದರ್ಶಿ ಡಾ.ವಿ.ಜಿ.ಅಂದಾನಿ ಮಾತನಾಡಿ, ‘ಸುರಪುರ ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ಪ್ರಮುಖವಾಗಿ 8–10 ಶೈಲಿಗಳಿವೆ. ಇವುಗಳಲ್ಲಿ ಘರಾನಾ ಮತ್ತು ಗರುಡಾದ್ರಿ ಹೆಚ್ಚು ಪ್ರಸಿದ್ಧಿ ಪಡೆದಿವೆ. ಭಾರತೀಯ ಸಂಪ್ರದಾಯದಲ್ಲಿ ಕಲೆಗೆ ಮಹತ್ವದ ಸ್ಥಾನವಿದೆ. ಯುವ ಕಲಾವಿದರಿಗೆ ಈ ಬಗ್ಗೆ ತಿಳಿವಳಿಕೆ ನೀಡಲು ವಿಚಾರ ಸಂಕಿರಣ ಆಯೋಜಿಸಲಾಗಿದೆ’ ಎಂದು ಹೇಳಿದರು.

ಕರ್ನಾಟಕ ಚಿತ್ರಕಲಾ ಪರಿಷತ್‌ನ ಸಹ ಕಾರ್ಯದರ್ಶಿಗಳಾದ ಪ್ರೊ. ಅಪ್ಪಾಜಯ ಕೆ.ಎಸ್., ಪ್ರೊ. ಉಮಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.