ADVERTISEMENT

ಹೆಚ್ಚಿದ ಬಿಸಿಲು; ಬುಗ್ಗೆಯ ರಭಸ ಕ್ಷೀಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:40 IST
Last Updated 20 ಏಪ್ರಿಲ್ 2017, 5:40 IST

ಚಿಂಚೋಳಿ: ಮುಲ್ಲಾಮಾರಿ ನದಿ ದಂಡೆಯ ಮೇಲಿರುವ ಪಂಚ ಲಿಂಗೇಶ್ವರ ಪಾಪನಾಶ ಬುಗ್ಗೆಯಲ್ಲಿ ನೀರಿನ ರಭಸ ನಿಧಾನವಾಗಿ ಕ್ಷೀಣಿಸತೊಡಗಿದೆ. ಇಲ್ಲಿನ ಎರಡು ಲಿಂಗಗಳ ತೊಟ್ಟಿಗಳಲ್ಲಿ ಉಕ್ಕೇರುತ್ತಿದ್ದ ನೀರಿನ ಒತ್ತಡ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಸ್ನಾನದ ತೊಟ್ಟಿಯಲ್ಲಿ ನೀರಿನ ರಭಸ ಎಂದಿನಂತೆ ಮುಂದುವರೆದಿದೆ.
ಚಿಂಚೋಳಿಯಲ್ಲಿ ಮಂಗಳವಾರ 42 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಕೆಂಡ ಕಾರುವ ಪ್ರಖರ ಬಿಸಿಲಿನ ಮಧ್ಯೆಯೂ ಅಲ್ಲಲ್ಲಿ ಅಂತರ್ಜಲ ಕುಸಿಯುತ್ತಿರುವ ಬೆನ್ನಲ್ಲೇ ಚಿಂಚೋಳಿಯ ಬುಗ್ಗೆಯಲ್ಲಿ ನೀರಿನ ಒರತೆ ಉತ್ತಮವಾಗಿದೆ. ನಂದಿ ಮೂರ್ತಿ ಹಾಗೂ ಶಿವಲಿಂಗಗಳ ತೊಟ್ಟಿಯ ಬುಗ್ಗೆಯಲ್ಲಿ ಒಂದೊಂದು ಲಿಂಗ ಒಂದೊಂದು ಮಟ್ಟದಲ್ಲಿ ಸ್ಥಾಪಿಸಲಾಗಿದೆ.

ಬುಗ್ಗೆಯ ನೀರು ಹಾದು ಹೋಗುವ ಮೋರಿ ಬಂದ್‌ ಮಾಡಿದರೆ, ಒಂದೊಂದಾಗಿ ಐದು ಲಿಂಗಗಳು ನೀರಿನಲ್ಲಿ ಮುಳುಗತ್ತವೆ.ಇಲ್ಲಿನ ನಂದಿ ಮೂರ್ತಿಯ ಎದುರಿನ ದೊಡ್ಡ ಸಂದಿಯಿಂದ ನೀರು ಹರಿಯುವುದರ ಜತೆಗೆ ತೊಟ್ಟಿಯ ವಿವಿಧ ಭಾಗಗಳಲ್ಲಿ ಶಿವಲಿಂಗಗಳ ಕೆಳಗಿನಿಂದ ನೀರು ಉಕ್ಕೇರುತ್ತವೆ.‘ಸ್ನಾನದ ತೊಟ್ಟಿಯಲ್ಲಿ ನೀರಿನ ಕೊರತೆಯಿಲ್ಲ. ಇದು 1972ರ ಭೀಕರ ಬರಗಾಲದಲ್ಲೂ ಬತ್ತಿಲ್ಲ. ಇಲ್ಲಿಂದಲೇ ಸುತ್ತಲಿನ 25ಕ್ಕೂ ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿದೆ’ ಎಂದು ಹಿರಿಯರಾದ ಅಶೋಕ ಪಾಟೀಲ ತಿಳಿಸಿದರು. ಪಟ್ಟಣದ ಯುವಕರು, ಹಿರಿಯರು ಬೇಸಿಗೆಯಲ್ಲಿ ಇಲ್ಲಿ ಬಂದು ಸ್ನಾನ ಮಾಡಿ ಬಿಸಿಲಿನ ತಾಪ ನಿವಾರಿಸಿಕೊಳ್ಳುತ್ತಾರೆ. ಪಂಚಲಿಂಗಗಳ ಬುಗ್ಗೆಯ ತೊಟ್ಟಿಗೆ ಗ್ರಿಲ್‌ ಅಳವಡಿಸಿದ್ದು, ಅದಕ್ಕೆ ಬೀಗ ಹಾಕಿ ಸ್ವಚ್ಛತೆ ಕಾಪಾಡಲಾಗುತ್ತಿದೆ.

ಆದರೆ ದೂರದ ಊರುಗಳ ಜನರು ಪಾಪನಾಶ ಪಂಚಲಿಂಗಗಳ ದರ್ಶನಕ್ಕೆ ಬಂದವರು ಹೊರಗಡೆಯಿಂದ ದರ್ಶನ ಮಾಡುವಂತಾಗಿದೆ. ಎರಡು ತೊಟ್ಟಿಗಳು ಒಳಗೊಂಡಂತೆ ಸುತ್ತಲೂ ಗ್ರಿಲ್‌ ಅಳವಡಿಸಬೇಕು. ಎರಡು ತೊಟ್ಟಿ ಮಲಿನಗೊಳ್ಳದಂತೆ ರಕ್ಷಿಸಿ ಇವುಗಳಲ್ಲಿ ಶಿವ ಮೂರ್ತಿ ಪ್ರತಿಷ್ಠಾಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿ ಸಬೇಕು ಎಂದು ಭೀಮಾ ಮಿಷನ್‌ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.