ADVERTISEMENT

ಹೊಲದಲ್ಲಿ ಹಂದಿ ಕಾಟ: ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 6:11 IST
Last Updated 23 ಜುಲೈ 2017, 6:11 IST

ಕಮಲಾಪುರ: ಬೆಳಕೋಟಾ, ದಸ್ತಾಪುರ, ನಾವದಗಿ ಸೇರಿದಂತೆ ಕಮಲಾಪುರ ಸುತ್ತಲಿನ ಪ್ರದೇಶದಲ್ಲಿ ಹಂದಿ ಹಾವಳಿ ಹೆಚ್ಚಾಗಿದ್ದು, ಬೆಳೆದ ಬೆಳೆ ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕಬ್ಬಿನ ತೋಟಕ್ಕೆ ಹಂದಿಗಳ ಕಾಟ ಹೆಚ್ಚಾಗಿದೆ. ಬೆಳಕೋಟಾದ ರೈತ ಅಜೀಜ್‌ ಪಟೇಲ್‌ ಅವರ ತೋಟದಲ್ಲಿ ಸುಮಾರು 2 ಎಕರೆ, ಬಸವರಾಜ ಕೋರಿಯವರ ತೋಟದಲ್ಲಿ 1 ಎಕರೆ, ಶಿವನಂದಯ್ಯ ಸ್ವಾಮಿ ಅವರ ತೋಟದಲ್ಲಿ 1 ಎಕರೆ, ಸಿದ್ದಪ್ಪ ಪಾಟೀಲ ತೋಟದಲ್ಲಿ 1 ಎಕರೆ ಕಬ್ಬು ನಾಶಪಡಿಸಿವೆ.

ಇಸ್ಮಾಯಿಲ್‌ ಪಟೇಲ್‌ ಖಾಸಿಂ ಪಟೇಲ್‌, ತುಕಾರಾಮ ಕಾಜಳೆ, ಏಕನಾಥ ಕಾಜಳೆ, ನಾಮದೇವ ಕಾಜಳೆ ಅವರ ಹೊಲದಲ್ಲೂ ಹಂದಿ ಕಾಟದಿಂದ ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ‘ದಸ್ತಾಪುರದಲ್ಲಿ ವೀರಣ ಕೋಟಿಯವರ ತೋಟದಲ್ಲಿ ಎರಡು ಎಕರೆ, ನಾವದಗಿಯಲ್ಲಿ ಅರುಣಕುಮಾರ ಹತ್ತಿಯವರ ತೋಟದಲ್ಲಿ 3 ಎಕರೆ ಕಬ್ಬು ಹಾನಿ ಮಾಡಿವೆ’ ಎಂದು ರೈತರು ತಿಳಿಸಿದ್ದಾರೆ.

‘ಬಿತ್ತಿದ ಬಳಿಕ ಬೀಜಗಳನ್ನು ಹಂದಿಗಳು ಹೆಕ್ಕಿ ತಿಂದಿದ್ದು, ಹೊಲಗಳಲ್ಲಿ ಬೆಳೆ ಸಮರ್ಪಕ ನಾಟಿಯಾಗಿಲ್ಲ. ಹೆಸರು, ಉದ್ದಿನ ಬೆಳೆಗಳಲ್ಲಿ ಹೊರಳಾಡಿ ನಾಶ ಮಾಡಿವೆ. ಬಾಳೆ ಗಿಡಗಳನ್ನು ಕೆಡುವುತ್ತಿವೆ. ರಾತ್ರಿ, ಹಗಲು ಹೊಲದಲ್ಲೆ ಉಳಿದು ಬೆಳೆ ಕಾದರೂ ಫಸಲು ರಕ್ಷಿಸಿಕೊಳ್ಳಲಾಗುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಹೊಲದ ಸುತ್ತ ತಂತಿ ಬಿಗಿದು ವಿದ್ಯುತ್‌ ಹರಿಬಿಟ್ಟರೂ ಹಂದಿಗಳ ಕಾಟ ತಪ್ಪಿಲ್ಲ. ಕೆಲವು ದಿನಗಳ ಹಿಂದೆ ವಿದ್ಯುತ್‌ ತಗುಲಿ ಎಮ್ಮೆ ಮೃತಪಟ್ಟಿದ್ದು, ಅದಕ್ಕೆ ದಂಡ ಕಟ್ಟಿದ್ದೇವೆ’ ಎನ್ನುತ್ತಾರೆ ನಾವದಗಿ ರೈತ ಅರುಣ ಹತ್ತಿ. ‘ಹಂದಿ ಹಾವಳಿಗೆ ಅರಣ್ಯ ಇಲಾಖೆಯವರು ಪರಿಹಾರ ನೀಡಬೇಕು. ಆದರೆ, ನೀಡಿಲ್ಲ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.