ADVERTISEMENT

ರಾಜ್ಯದಲ್ಲೂ ‘ಭಾವಾಂತರ’ ಜಾರಿಗೊಳಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 9:40 IST
Last Updated 19 ಫೆಬ್ರುವರಿ 2018, 9:40 IST
ಬಸವರಾಜ ಪಾಟೀಲ ಸೇಡಂ
ಬಸವರಾಜ ಪಾಟೀಲ ಸೇಡಂ   

ಕಲಬುರ್ಗಿ: 'ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಧಾನ್ಯ ಮಾರಾಟವಾದರೆ ವ್ಯತ್ಯಾಸವಾದ ಬೆಲೆಯನ್ನು ಭರಿಸುವ ಭಾವಾಂತರ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಬೇಕು’ ಎಂದು ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ತಿಳಿಸಿದ್ದಾರೆ.

ರಾಜ್ಯದಲ್ಲಿನ ತೊಗರಿ ಖರೀದಿ ಮಿತಿ ಹೆಚ್ಚಳ ಸಂಬಂಧ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ಬರೆದಿರುವ ಪತ್ರಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

'ಮಾರುಕಟ್ಟೆಯಲ್ಲಿನ ದರ ಆಧರಿಸಿ ಕನಿಷ್ಠ ಬೆಂಬಲ ನಿರ್ಧರಿಸುವ ಭಾವಾಂತರ ಯೋಜನೆಯನ್ನು ಮಧ್ಯಪ್ರದೇಶ ಸರ್ಕಾರ ಅನುಷ್ಠಾನಗೊಳಿಸಿದೆ. ಇದರಿಂದ ಅಲ್ಲಿನ ರೈತರ ಸಮಸ್ಯೆ ನಿವಾರಣೆ ಆಗಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಿದರೆ ತೊಗರಿ ಬೆಳೆಗಾರರಿಗೆ ಅನುಕೂಲ ಆಗಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ವಿಧಿಸಿರುವ ಮಿತಿಗಿಂತ ಹೆಚ್ಚುವರಿ ತೊಗರಿ ಖರೀದಿಗೆ ಅವಕಾಶ ವಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ತೊಗರಿ ಬೆಳೆಯಲಾಗಿದೆ. ರೈತರ ಹಿತ ಕಾಯಲು ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಹೇಳಿದ್ದಾರೆ.

ಆರ್ಥಿಕ ಸಲಹೆಗಾರರ ಪತ್ರವನ್ನು ಬಸವರಾಜ ಸೇಡಂ ಅವರು ರಾಜ್ಯದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ರವಾನಿಸಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ಈ ಯೋಜನೆಯನ್ನು ಜಾರಿಗೆ ತರಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.