ADVERTISEMENT

ಎರಡು ಗ್ರಾ.ಪಂ.ಗಳಿಗೆ ‘ಸಮಸ್ಯೆಯ ಗುಡ್ಡ’ವಾದ ಕಸ!

ಕಸ ಸುರಿಯುವಿಕೆ: ಶನಿವಾರಸಂತೆ, ದುಂಡಳ್ಳಿ ಗ್ರಾಮ ಪಂಚಾಯಿತಿಗಳ ಸಮನ್ವಯ ಸಭೆ

​ಪ್ರಜಾವಾಣಿ ವಾರ್ತೆ
Published 12 ಮೇ 2017, 10:28 IST
Last Updated 12 ಮೇ 2017, 10:28 IST
ಶನಿವಾರಸಂತೆ: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ಸುರಿ ಯುವಿಕೆಗೆ ಸ್ಥಳ ನಿಗದಿಪಡಿಸಲು ಜಾಗ ಕುರಿತು ಒಮ್ಮತಕ್ಕೆ ಬರಲು ದುಂಡಳ್ಳಿ ಮತ್ತು ಶನಿವಾರಸಂತೆ ಗ್ರಾಮ ಪಂಚಾಯಿತಿಗಳ ಸಮನ್ವಯ ಸಭೆ ಈಚೆಗೆ ನಡೆಯಿತು.
 
ಉಭಯ ಗ್ರಾಮ ಪಂಚಾಯಿತಿಗಳ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿ ಗಳು, ಗ್ರಾಮ ಪ್ರಮುಖರು ಹಾಗೂ ಜನಪ್ರತಿನಿಧಿಗಳು ತ್ಯಾಗರಾಜ ಕಾಲೋ ನಿಯ ಸಮುದಾಯ ಭವನದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಪಾಲ್ಗೊಂಡಿದ್ದರು.
 
ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ.ಗಿರೀಶ್ ನೇತೃತ್ವ ವಹಿಸಿದ್ದರು.
ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಅವರು, ‘ಶನಿವಾರಸಂತೆ ಪಟ್ಟಣ 2011ರಿಂದ ಕಸ ಸುರಿಯುವಿಕೆಗೆ ಸಮಸ್ಯೆ ಎದುರಿಸುತ್ತಿದೆ. ಕಸ ಸುರಿಯಲು ಗುರುತಿಸಿದ ಸ್ಥಳದ ಬಳಿಯೇ ಸಮು ದಾಯ ಆರೋಗ್ಯ ಕೇಂದ್ರ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಉರ್ದು ಶಾಲೆ ಇದ್ದು, ವಿರೋಧವಿದೆ’ ಎಂದರು.
 
ಕಸ ಸುರಿಯಲು ಪಟ್ಟಣದಲ್ಲಿ ಜಾಗವೂ ಇಲ್ಲ. ವರ್ಷದ ಹಿಂದೆ ಜಿಲ್ಲಾಧಿ ಕಾರಿ ಅವರು ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2 ಎಕರೆ ಜಾಗದಲ್ಲಿ ಉಭಯ ಗ್ರಾ.ಪಂ ವ್ಯಾಪ್ತಿಯ ಕಸ ಸುರಿಯಲು ಜಾಗ ಗುರುತಿಸಿದ್ದರು. ಇದಕ್ಕೆ ದುಂಡಳ್ಳಿ ಗ್ರಾಮ ಪಂಚಾಯಿತಿ ವಿರೋಧದ  ಕಾರಣ ಸಮಸಸ್ಯೆ ಉದ್ಘವಿಸಿದೆ.
 
ಉಭಯ ಗ್ರಾಮ ಪಂಚಾಯಿತಿಗಳು ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಜಾಗ ಸೂಚಿಸಲು ಸಮನ್ವಯ ಸಭೆ ಕರೆಯಲಾಗಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ಜಾಗದ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
 
ಸ್ಪಂದಿಸದ ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪ್ರಮು ಖರು, ‘ಜನಸಂದಣಿ ಇಲ್ಲದ ಬೇಕನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಮೂಲಕ ಜಾಗ ಪಡೆದು ಕಸ ವಿಲೇವಾರಿ ಮಾಡಲಿ’’ ಎಂದು ಸಲಹೆ ನೀಡಿದರು.
 
ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ.ಗಿರೀಶ್, ‘ದುಂಡಳ್ಳಿ ಗ್ರಾಮ ಪಂಚಾಯಿತಿ ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿ ಸೂಚಿಸಿದ ಜಾಗದಲ್ಲಿ ಕಸ ಸುರಿಯಲು ಅವಕಾಶ ನೀಡುವುದಿಲ್ಲ’ ಎಂದರು.
 
’ಅದು ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಕಾದಿರಿಸಿರುವ ಜಾಗ. ನಮ್ಮ ಪಂಚಾಯಿತಿಗೂ ಜಾಗದ ಸಮಸ್ಯೆ ಯಿದೆ.ಬೇಕನಹಳ್ಳಿ ಗ್ರಾಮದಲ್ಲಿ ಅವಕಾಶ ಮಾಡಿ ಕೊಡಲಾಗುವುದು’ ಎಂದರು.
 
ಶನಿವಾರಸಂತೆ ಗ್ರಾ.ಪಂ ಪರ ಎಸ್.ಎನ್.ರಘು, ಮಹಮ್ಮದ್ ಪಾಶ, ಬಿ.ಟಿ.ರಂಗಸ್ವಾಮಿ, ಸಿ.ಎಂ.ಪುಟ್ಟಸ್ವಾಮಿ, ಸರ್ದಾರ್ ಪಾಶ;  ದುಂಡಳ್ಳಿ  ಪರ ಪ್ರಮುಖರಾದ ಡಿ.ಪಿ.ಬೋಜಪ್ಪ, ಕೆ.ಟಿ.ಹರೀಶ್, ಸುಬ್ರಹ್ಮಣ್ಯ, ಶಂಭು ಮಾತನಾಡಿದರು.
 
ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಸ್.ಅನಂತಕುಮಾರ್ ಮಾತ ನಾಡಿದರು. ಜಿಲ್ಲಾ ಪಂಚಾಯಿತಿ  ಸ್ವಚ್ಛ ಭಾರತ್ ಮಿಶಿನ್ ಸಂಸ್ಥೆಯ ಅಧಿಕಾರಿ ಪೆಮ್ಮಯ್ಯ ‘ಶುಚಿತ್ವ ಮತ್ತು ಕಸ ವಿಲೇವಾರಿ’ ಕುರಿತು ಉಪನ್ಯಾಸ ನೀಡಿದರು.
 
ಉಭಯ ಗ್ರಾಮ ಪಂಚಾಯಿತಿಗಳ ಉಪಾಧ್ಯಕ್ಷರು, ಸದಸ್ಯರು, ಶನಿವಾರ ಸಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.