ಗೋಣಿಕೊಪ್ಪಲು: ಕಾಡಾನೆ ಸಮಸ್ಯೆ ಪರಿಹಾರಕ್ಕೆ ಸರ್ಕಾರ ರೂಪಿಸುವ ಯೋಜನೆಗಳನ್ನು 15 ದಿನಗಳಲ್ಲಿ ಅರಣ್ಯ ಇಲಾಖೆ ಜಾರಿಗೊಳಿಸದಿದ್ದಲ್ಲಿ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪೃಥ್ಯು ಎಚ್ಚರಿಸಿದ್ದಾರೆ.
ತಿತಿಮತಿಯಲ್ಲಿ ಶುಕ್ರವಾರ ರಾತ್ರಿ ನಡೆದ ಕಾಡಾನೆ ದಾಳಿ ಪ್ರಕರಣಕ್ಕೆ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವಲಯ ನೇರಹೊಣೆ. ಸರ್ಕಾರದಿಂದ ರೂಪಿಸಿರುವ ಯೋಜನೆಗಳನ್ನು ಕಾರ್ಯಗತಗೊಳಿಸದಿರುವುದೇ ಕಾಡಾನೆ ಗ್ರಾಮಕ್ಕೆ ಕಾರಣ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕಳೆದ ಬಾರಿ ಅರಣ್ಯ ಸಚಿವ ರಮಾನಾಥ ರೈ ತಿತಿಮತಿಗೆ ಬಂದಾಗ, ಕಾಡಾನೆ ಸಮಸ್ಯೆ ಪರಿಹಾರಕ್ಕೆ ಅನುದಾನ ಘೋಷಿಸಿದ್ದರು. ಆದರೆ, ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿ ವರ್ಗ ವಿಫಲರಾಗಿದ್ದಾರೆ. ಸತ್ತ ಮೇಲೆ ಪರಿಹಾರ ನೀಡುವುದೇ ಅರಣ್ಯ ಇಲಾಖೆ ಕಾರ್ಯಕ್ರಮವಾಗಿದೆ ಎಂದು ದೂರಿದರು.
ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀರ ಧರ್ಮಜ ಮಾತನಾಡಿ, ರೈಲ್ವೆ ಕಂಬಿ ಬಳಸಿ ಆನೆಗಳು ಗ್ರಾಮಕ್ಕೆ ನುಸುಳದಂತೆ ಸರ್ಕಾರ ರೂಪಿಸಿರುವ 11 ಕಿ. ಮೀ ದೂರದ ಈ ಯೋಜನೆ ನನೆಗುದಿಗೆ ಬಿದ್ದಿದೆ.
ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾಮಗಾರಿ ನಡೆಯದಿರುವದು ಆನೆ ಗ್ರಾಮಕ್ಕೆ ನುಸುಳಲು ಕಾರಣವಾಗಿದೆ. ಅರಣ್ಯದಲ್ಲಿ ನೀರು, ಆಹಾರ ಸಿಗುವಂತೆ ಇಲಾಖೆ ಕಾರ್ಯ ಯೋಜನೆ ರೂಪಿಸಿಲ್ಲ ಎಂದು ಆರೋಪಿಸಿದರು.
ಶೀಘ್ರದಲ್ಲಿ ಕ್ರಮಕ್ಕೆ ಮುಂದಾಗದಿದ್ದಲ್ಲಿ ಕಾಂಗ್ರೆಸ್ ಪಕ್ಷ, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.