ADVERTISEMENT

‘ಕಾವೇರಿ ವಿವಾದ; ಮದ್ಯ ಲಾಬಿ ಕಾರಣ’

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:57 IST
Last Updated 22 ಮೇ 2017, 6:57 IST

ಕುಶಾಲನಗರ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ಕಾವೇರಿ ವಿವಾದ ಆಗಾಗ ಕಾಣಿಸಿಕೊಳ್ಳಲು ಮದ್ಯ ಲಾಬಿಯೇ ಕಾರಣ’ ಎಂದು ಆಹಾರ ತಜ್ಞ, ಮೈಸೂರಿನ ಖಾದರ್ ಅಭಿಪ್ರಾಯಪಟ್ಟರು.

ಪಟ್ಟಣ ಬೈಚನಹಳ್ಳಿ ವಿವೇಕಾನಂದ ಪಿಯು ಕಾಲೇಜು ಸಭಾಂಗಣದಲ್ಲಿ ಆರ್ಯವೈಶ್ಯ ಮಂಡಳಿ ಹಾಗೂ ವಾಸವಿ ಯುವತಿ ಮಂಡಳಿ ಭಾನುವಾರ ಆಯೋಜಿಸಿದ್ದ ‘ಸಿರಿಧಾನ್ಯ ಆರೋಗ್ಯಕ್ಕೆ ವರದಾನ’ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು ಕೆ.ಜಿ ಸಕ್ಕರೆ ಉತ್ಪಾದಿಸಲು 28 ಸಾವಿರ ಲೀಟರ್ ನೀರು ಬೇಕು. ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆಗಿಂತ ಮದ್ಯಕ್ಕೆ ಬೇಕಾಗುವ ಕಚ್ಚಾವಸ್ತು ಉತ್ಪಾದನೆಯೇ ಲಾಭದಾಯಕ. ಈ ಕಾರಣದಿಂದ ಸಕ್ಕರೆ ಉತ್ಪಾದಿಸಲು ನೀರು ಬೇಕು ಎನ್ನುವ ಕಾರಣ ಇಟ್ಟುಕೊಂಡು ಹೋರಾಟಗಳನ್ನು ಪ್ರಾಯೋಜಿಸಲಾಗುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಮೊದಲೆಲ್ಲಾ ಮಹಿಳೆಯರಲ್ಲಿ ಬೊಕ್ಕತಲೆ ಸಮಸ್ಯೆ ವಿರಳವಾಗಿತ್ತು. ಒಂದು ಕೋಟಿಗೆ ಒಬ್ಬ ಮಹಿಳೆಯಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ನೂರರಲ್ಲಿ ನಾಲ್ಕು ಮಂದಿ ಮಹಿಳೆಯರಿಗೆ ಬೊಕ್ಕತಲೆ ಸಮಸ್ಯೆ ಇದೆ. ಇದಕ್ಕೆ ಈಗಿನ ಆಹಾರ ಪದ್ಧತಿ ಮತ್ತು ಅದನ್ನು ಪ್ರೋತ್ಸಾಹಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳೇ ಕಾರಣ.

ಹಾಲು, ಮೊಟ್ಟೆ, ಮಾಂಸ ಉತ್ಪಾದನೆಯನ್ನು ಹೆಚ್ಚಿಸುವ ಮಹಾತ್ವಾಕಾಂಕ್ಷೆಯಿಂದ ಯಥೇಚ್ಛವಾಗಿ ಹಾರ್ಮೋನ್ ಬಳಸಲಾಗುತ್ತಿದೆ. ಇದರಿಂದಾಗಿ ಭಾರತದಲ್ಲೂ 10 ವರ್ಷದ ಒಳಗಿನ ಬಾಲಕಿಯರು ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಾರೆ. ಪುರುಷರಲ್ಲಿ ಕೂದಲು ಕಡಿಮೆ ಆಗುತ್ತಿದ್ದರೆ, ಮಹಿಳೆಯರ ಮುಖದಲ್ಲಿ ಕೂದಲು ಕಾಣಿಸಿಕೊಳ್ಳುತ್ತಿದೆ. ನಮ್ಮ ಆಹಾರದಲ್ಲಿ ನಾರಿನಾಂಶ ಇಲ್ಲದಿರುವುದೇ ಹಲವು ರೋಗಗಳು ಕಾಣಿಸಿಕೊಳ್ಳಲು ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.

ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಬಿ.ಎ.ರಶ್ಮಿ, ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ ಹಾಗೂ ವಿವೇಕಾನಂದ ಕಾಲೇಜು ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT