ಮಡಿಕೇರಿ:‘ಕೇಂದ್ರ ಸರ್ಕಾರವು ಬಜೆಟ್ ಸೇರಿದಂತೆ ಎಲ್ಲೂ ಸಹ ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಿಸುವ ಬಗ್ಗೆ ಇದುವರೆಗೂ ಪ್ರಸ್ತಾಪವನ್ನೇ ಮಾಡಿಲ್ಲ’ ಎಂದು ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಟಿ.ಪಿ. ರಮೇಶ್ ದೂರಿದರು.
ನಗರದಲ್ಲಿ ಭಾನುವಾರ ನಡೆದ ಮಡಿಕೇರಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯ ಕಿಯರ ಸಂಘದ 17ನೇ ವರ್ಷದ ಮಹಾ ಸಭೆಯಲ್ಲಿ ಅವರು ಮಾತನಾಡಿದರು
‘ರಾಜ್ಯ ಸರ್ಕಾರವು ವೇತನ ಹೆಚ್ಚಿಸಿದ್ದು, ಇನ್ನು ಹೋರಾಟ ಕೇಂದ್ರದ ಮೋದಿ ಸರ್ಕಾರದ ಕಡೆಗೆ ಸಾಗಬೇಕಿದೆ. ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯ ಕರ್ತೆಯರು ಹೋರಾಟ ನಡೆಸಿದಾಗ ತಕ್ಷಣ ಸ್ಪಂದಿಸಿದ ರಾಜ್ಯ ಸರ್ಕಾರ ವೇತನ ಹೆಚ್ಚಿಸುವ ಕೆಲಸ ಮಾಡಿತು.
ಆದರೆ, ಕೇಂದ್ರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಪಾದಿಸಿದರು. ‘ಮೋದಿ ಸರ್ಕಾರವು ಆರಂಭದಲ್ಲಿ ಅಸ್ತಿತ್ವಕ್ಕೆ ಬಂದಾಗ ಹೆಣ್ಣು ಮಕ್ಕಳು ಸಂಭ್ರಮಿಸಿದ್ದರು. ಆದರೆ, ಮೂರು ವರ್ಷ ಕಳೆದರೂ ಒಳ್ಳೆಯ ದಿನಗಳು ಬಂದಿಲ್ಲ. ಅಬಲೆಯರನ್ನು ಮೇಲೆತ್ತುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿಲ್ಲ’ ಎಂದು ದೂರಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮುಮ್ತಾಜ್ ಮಾತನಾಡಿ, ಸ್ತ್ರೀ ಶಕ್ತಿ ಯನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖ ವಾಗಿದೆ. ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರಿಗೆ ಇಲಾಖೆ ಮೂಲಕ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದಲ್ಲಿ ಸಮಾಜದಲ್ಲಿ ಅಂಗನ ವಾಡಿ ಕಾರ್ಯಕರ್ತೆಯರಿಗೆ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು. ಸಂಘದ ಪದಾಧಿಕಾರಿ ದೇವಮ್ಮಾಜಿ, ಕಾರ್ಯದರ್ಶಿ ಪವಿತ್ರಾ, ವೀಣಾ ಕುಮಾರಿ, ಸುಜಾತಾ, ಸಂಘದ ಅಧ್ಯಕ್ಷೆ ನಾಗರತ್ನಾ, ಸಂಘದ ಮಾಜಿ ಅಧ್ಯಕ್ಷೆ ಅಕ್ಕಮ್ಮ, ಶಿಶು ಅಭಿವೃದ್ಧಿ ಅಧಿಕಾರಿ ದಮಯಂತಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.