ಸೋಮವಾರಪೇಟೆ: ಪಟ್ಟಣದಲ್ಲಿ ಒಂದು ಸುವ್ಯಸ್ಥಿತವಾದ ಟೌನ್ಹಾಲ್ ನಿರ್ಮಿಸಬೇಕೆಂಬ ಬಹು ವರ್ಷಗಳ ಬೇಡಿಕೆ ಇದೀಗ ಸಾಕಾರಗೊಳ್ಳುತ್ತಿದೆ. ಪಟ್ಟಣದಲ್ಲಿ ಯಾವುದೇ ಸಭೆ ಸಮಾರಂಭಗಳನ್ನು ನಡೆಸಲು ಸೂಕ್ತ ವೇದಿಕೆಯ ಕೊರತೆ ಕಾಡುತಿದೆ. ಹೆಚ್ಚಿನ ರಾಜಕೀಯ ಹಾಗೂ ಇನ್ನಿತರ ಸಭೆಗಳು ಮುಖ್ಯ ರಸ್ತೆಯ ಜೇಸಿ ವೇದಿಕೆಯಲ್ಲಿಯೇ ನಡೆಸುವುದರಿಂದ ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ತೊಂದರೆಯಾಗಿತ್ತು. ಸಭೆಗಳು ನಡೆಯುವ ದಿನ ಆಟೊಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದರು.
ಆದರೆ, ಟೌನ್ಹಾಲ್ ನಿರ್ಮಾಣವಾದರೆ ಈ ಎಲ್ಲಾ ಸಮಸ್ಯೆಗಳಿಂದ ಅಲ್ಪಮಟ್ಟಿಗೆ ಪರಿಹಾರ ದೊರಕುವುದರಿಂದ ಇದರೊಂದಿಗೆ ಪಟ್ಟಣ ಪಟ್ಟಣ ಪಂಚಾಯಿತಿಗೆ ಸೂಕ್ತ ಕಚೇರಿ ಹಾಗೂ ವಾಹನ ನಿಲುಗಡೆಗೆ ಅವಕಾಶವಾಗುತ್ತಿದೆ.
ಪಟ್ಟಣ ಪಂಚಾಯಿತಿ ಎರಡು ಆಡಳಿತ ಅವಧಿಯಿಂದಲೂ ಟೌನ್ಹಾಲ್ ನಿರ್ಮಿಸುವ ಯೋಜನೆಯನ್ನು ರೂಪಿಸಿದ್ದರೂ, ಸೂಕ್ತ ಅನುದಾನದ ಕೊರತೆಯಿಂದ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ರಾಜ್ಯ ಸರ್ಕಾರ ಪೌರಾಡಳಿತ ಇಲಾಖೆಯಿಂದ ₹ 2 ಕೋಟಿ ಒದಗಿಸಿದ್ದು, ಈ ಹಣದಿಂದ ಪಟ್ಟಣ ಪಂಚಾಯಿತಿ ಎದುರು ವಿಶಾಲವಾದ ಜಾಗದಲ್ಲಿ ಭವನ ನಿರ್ಮಾಣವಾಗುತ್ತಿದೆ.
ಈ ಭವನದಲ್ಲಿ ನೆಲ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುವುದು. ಮೊದಲ ಅಂತಸ್ತಿನಲ್ಲಿ 12 ವಾಣಿಜ್ಯ ಮಳಿಗೆ ಹಾಗೂ ಪಟ್ಟಣ ಪಂಚಾಯಿತಿಗೆ ಕಚೇರಿ. ಎರಡನೇ ಮಳಿಗೆಯಲ್ಲಿ ಆಧುನಿಕ ಶೈಲಿಯಲ್ಲಿ ಸಭಾಂಗಣ ನಿರ್ಮಾಣ ಮಾಡಲಾಗುತ್ತಿದೆ.
ಹಲವು ವರ್ಷಗಳ ಹಿಂದೆಯೇ ಪಟ್ಟಣದಲ್ಲಿ ಟೌನ್ಹಾಲ್ ನಿರ್ಮಾಣ ಮಾಡಲು ಅವಕಾಶಗಳಿದ್ದರೂ, ಅದನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ. ಈಗಲಾದರೂ ಆದಷ್ಟು ಬೇಗ ನಿರ್ಮಿಸಿದಲ್ಲಿ ಜನರು ಬೀದಿಯಲ್ಲಿ ನಿಂತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ತಪ್ಪಿಸಬಹುದು.
ಅಲ್ಲದೆ, ಸೋಮವಾರವೇ ಹೆಚ್ಚು ರಾಜಕೀಯ ಸಭೆಗಳು ನಡೆಯುವುದರಿಂದ ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ತೊಡಕ್ಕಾಗಿತ್ತು. ಉದ್ದೇಶಿತ ಹಾಲ್ ನಿರ್ಮಾಣದಿಂದ ಸರ್ವರಿಗೂ ಅಲ್ಪಮಟ್ಟಿಗಾದರೂ ಅನುಕೂಲವಾಗುತ್ತದೆ ಎಂದು ವಾಹನ ಚಾಲಕರ ಸಂಘದ ಅಧ್ಯಕ್ಷ ಸಿ.ಸಿ. ನಂದ ಅಭಿಪ್ರಾಯಪಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.