ADVERTISEMENT

ಮೈಸೂರು ಶಾಸಕ ಭೇಟಿ; ಕಂಬಳಿ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2016, 8:51 IST
Last Updated 23 ಡಿಸೆಂಬರ್ 2016, 8:51 IST

ಸಿದ್ದಾಪುರ: ದಿಡ್ಡಳ್ಳಿ ಗಿರಿಜನರ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಮೈಸೂರು ಶಾಸಕ ಎಂ.ಕೆ.ಸೋಮಶೇಖರ್, ಗಿರಿಜನರಿಗೆ 50 ಕಂಬಳಿ,  ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು.

ಪ್ರತಿಭಟನೆಯಲ್ಲಿ ಹೊರಗಿವರು ಭಾಗವಹಿಸಿದ್ದಾರೆ ಎಂಬ ಆರೋಪದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಗಿರಿಜನ ಮಹಿಳೆಯರು ಗುಡಿಸಲುಗಳತ್ತ ತೋರಿಸಿ, ‘ಗಿರಿಜನರಲ್ಲದವರು ಇಲ್ಲಿ ಯಾರಿದ್ದಾರೆ ನೋಡಿ’ ಎಂದರು.

ಪ್ರತಿಭಟನಾ ನಿರತರೊಂದಿಗೆ ಮಾತನಾಡಿದ ಶಾಸಕ ಸೋಮಶೇಖರ್, ಸರ್ಕಾರ ಸೂಚಿಸಿದಂತೆ ಪುನರ್ವಸತಿ ಕಲ್ಪಿಸಲು ಮೂರು ತಿಂಗಳು ಆಗುವುದಾದರೆ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನೂರು ದಿನಗಳ ಉದ್ಯೋಗ ನೀಡಬೇಕು ಎಂದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ, ರಾಜ್ಯ ಘಟಕದ ಕಾರ್ಯದರ್ಶಿ ಕಿರಣ್ ಪೂಣಚ್ಚ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಅವಮಾನ ಆರೋಪ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಮಧ್ಯಾಹ್ನದಿಂದ ಆಹಾರದ ವ್ಯವಸ್ಥೆ ಮಾಡಲಾಗಿದ್ದು, ಊಟ ಸ್ವೀಕರಿಸಿದವರ ಹೆಸರು ಮತ್ತು ತಂದೆಯ ಹೆಸರು, ವಯಸ್ಸು ಕೇಳಿ ಅವಮಾನ ಮಾಡಿದರು ಎಂದು ನಿರಾಶ್ರಿತರಲ್ಲಿ ಒಬ್ಬರಾದ ಮುತ್ತ ಆರೋಪಿಸಿದರು.

ಒಂದು ಹೊತ್ತಿನ ಊಟ ನೀಡಲು ಈ ಮಾಹಿತಿ ನೀಡಬೇಕೆ ಎಂದು ಅವರು ಪ್ರಶ್ನಿಸಿದರು. ಅಧಿಕಾರಿಗಳೊಂದಿಗೆ ಮಾತನಾಡಿದ ಮುತ್ತಮ್ಮ, ಹೆಸರು ದಾಖಲಿಸುವುದಾದರೆ ಊಟ ಬೇಡ ಎಂದು ಪ್ರತಿಭಟಿಸಿದರು. ರಾತ್ರಿ ವೇಳೆ ಊಟ ಸ್ವೀಕರಿಸಿದವರ ಹೆಸರು ದಾಖಲಿಸಲಿಲ್ಲ ಎನ್ನಲಾಗಿದೆ.

ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದಂತೆ ನಿಷೇಧಾಜ್ಞೆ ಜಾರಿಗೊಂಡಿರುವ ಪ್ರದೇಶಕ್ಕೆ ತೆರಳುವ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಮಧ್ಯಾಹ್ನದ ಬಳಿಕ ತಪಾಸಣೆಯನ್ನು ಸಡಿಲಗೊಳಿಸಲಾಯಿತು.

ದಿಡ್ಡಳ್ಳಿಗೆ ಸಾಗುವ ಮೂಡಬಯಲು ಗುಡ್ಲೂರು ರಸ್ತೆ ಸೇರಿದಂತೆ ಕಲ್ಲಲ ಪೊಲೀಸ್‌ ತಪಾಸಣಾ ಕೇಂದ್ರಗಳಲ್ಲೂ ಹೆಚ್ಚುವರಿ ತನಿಖಾ ತಂಡ ನಿಯೋಜಿಸಲಾಗಿದೆ.
ಸ್ಥಳಕ್ಕೆ ಐಜಿಪಿ ಬಿಜಯ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿ ಹಿಂತಿರುಗಿದರು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಬಹುತೇಕ ಮಂದಿಗೆ ಈ ಬಗ್ಗೆ ತಿಳಿದಿಲ್ಲ. ನಿರಾಶ್ರಿತರ ಕೇಂದ್ರದ ಪ್ರದೇಶದಲ್ಲಿ ಎಂದಿನಂತೆ ದಿನಚರಿ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.