ADVERTISEMENT

ಸೇನೆ ಸೇರಿ: ವಿದ್ಯಾರ್ಥಿಗಳಿಗೆ ಸಲಹೆ

ಹಬ್ಬಗಳ ಆಚರಣಾ ಸಮಿತಿ; 68ನೇ ಗಣರಾಜ್ಯೋತ್ಸವ- ಕಾರ್ಯಕ್ರಮದಲ್ಲಿ ಮೇಜರ್ ಓ.ಎಸ್.ಚಿಂಗಪ್ಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 9:31 IST
Last Updated 27 ಜನವರಿ 2017, 9:31 IST
ಸೇನೆ ಸೇರಿ: ವಿದ್ಯಾರ್ಥಿಗಳಿಗೆ ಸಲಹೆ
ಸೇನೆ ಸೇರಿ: ವಿದ್ಯಾರ್ಥಿಗಳಿಗೆ ಸಲಹೆ   

ಕುಶಾಲನಗರ: ಯುವಜನಾಂಗ ಉತ್ತಮ ಶಿಕ್ಷಣ ಪಡೆಯುವ ಮೂಲಕ ಭಾರತೀಯ ಸೈನ್ಯಕ್ಕೆ ಸೇರಿ ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡಲು ಬದ್ಧರಾಗಬೇಕು ಎಂದು ಮೇಜರ್ ಓ.ಎಸ್.ಚಿಂಗಪ್ಪ ಸಲಹೆ ನೀಡಿದರು.

ಸ್ಥಳೀಯ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪಟ್ಟಣ ಪಂಚಾಯಿತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಗುರುವಾರ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಪ.ಪಂ. ಅಧ್ಯಕ್ಷ ಎಂ.ಎಂ.ಚರಣ್ ಧ್ವಜಾರೋಹಣ ನೆರವೇರಿಸಿ, ಯುವ ಶಕ್ತಿ ದೇಶದ ಶಕ್ತಿಯಾಗಿದ್ದು, ಯುವ ಜನಾಂಗವನ್ನು ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.

ನಾಡ ಕಚೇರಿ ಕಂದಾಯ ಅಧಿಕಾರಿ ನಂದಕುಮಾರ್, ವೃತ್ತ ನಿರೀಕ್ಷಕ ಕ್ಯಾತೇಗೌಡ ಬಹುಮಾನ ವಿತರಿಸಿದರು. ನಿವೃತ್ತ ಸೈನಿಕ ಕ್ಯಾಪ್ಟನ್ ಎಂ.ವಿ.ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ಕಾರ್ಯದರ್ಶಿ ರಘು ಸ್ವಾಗತಿಸಿದರು. ಶಿಕ್ಷಕರಾದ ಸವರೀನ್ ಡಿಸೋಜ, ಮಾರ್ಗರೇಟ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಶಿವಣ್ಣ ಅತಿಥಿ ಪರಿಚಯ ಮಾಡಿಕೊಟ್ಟರು. ಮಹೇಶ್ ಅಮೀನ್ ಅವರು ವಂದೇಮಾತರಂ ಗೀತೆ ಹಾಡಿದರು.

ಪ.ಪಂ.ಸದಸ್ಯರಾದ ಎಚ್.ಕೆ.ಕರಿಯಪ್ಪ, ನಂಜುಂಡಸ್ವಾಮಿ, ರೇಣುಕಾ, ರಶ್ಮಿ, ಪಾರ್ವತಿ, ಮಧುಸೂದನ್, ಚಂದ್ರು, ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ಮಾಜಿ ಉಪಾಧ್ಯಕ್ಷೆ ಕಮಲಗಣಪತಿ, ಪ.ಪಂ. ಮುಖ್ಯಾಧಿಕಾರಿ ಶ್ರೀಧರ್, ಆರೋಗ್ಯಾಧಿಕಾರಿ ನಿಂಗರಾಜು, ಕಾವಲು ಪಡೆಯ ಕೃಷ್ಣ, ಕರವೇಯ ವೆಂಕಟೇಶ್ ಪೂಜಾರಿ, ಪಿ.ಕೆ.ಜಗದೀಶ್ ಹಾಜರಿದ್ದರು. ಪರೇಡ್‌ ಕಮಾಂಡರ್ ಸದಾಶಿವ ಎಸ್.ಪಲ್ಲೇದ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.

ಸೈನಿಕ ಶಾಲೆಯಲ್ಲಿ ಗಣರಾಜೋತ್ಸವ: ಸಮೀಪದ ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಗುರುವಾರ ಗಣರಾಜ್ಯೋತ್ಸವ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್.ಎಚ್.ಬೆರ್ಸನ್ ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು.

ಇದೇ ವೇಳೆ ವಿದ್ಯಾರ್ಥಿ ನಾಯಕ  ಶುಭಂ ಪಾಟೀಲ್‌ಗೆ ಶಾಲೆಯ ‘ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ’ ಮತ್ತು  ‘ಅತ್ಯುತ್ತಮ ಶೈಕ್ಷಣಿಕ ವಿದ್ಯಾರ್ಥಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಿ.ಕೆ.ಮಹೇಶ್‌ಗೆ ಶಾಲೆಯ ಅತ್ಯುತ್ತಮ ಕ್ರೀಡಾ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು. 12ನೇ ತರಗತಿಯ ವಿದ್ಯಾರ್ಥಿಗಳಿಗೆ ನಿರ್ಗಮನ ಪಥಸಂಚಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಗೌರವ ವಂದನೆ ಸಲ್ಲಿಸಿದರು. ಶಾಲೆಯ ಕಿರಿಯ ವಿದ್ಯಾರ್ಥಿಗಳಿಂದ ದೇಶದ ಹುತಾತ್ಮರಿಗೆ ಗೌರವ ಸಲ್ಲಿಸುವ ಕಲಾ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.