ADVERTISEMENT

ಕೊಳಚೆ ನೀರು ಸರಬರಾಜು

​ಪ್ರಜಾವಾಣಿ ವಾರ್ತೆ
Published 29 ಜುಲೈ 2018, 17:55 IST
Last Updated 29 ಜುಲೈ 2018, 17:55 IST
ಸಿದ್ದಾಪುರ ಪಟ್ಟಣದ ಪ್ರಮುಖ ಚರಂಡಿಯ ಕೊಳಚೆ ನೀರು ನೇರವಾಗಿ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಕೊಳವೆ ಬಾವಿಗೆ ಹರಿದು ಮಿಶ್ರಣಗೊಳ್ಳುತ್ತಿದೆ
ಸಿದ್ದಾಪುರ ಪಟ್ಟಣದ ಪ್ರಮುಖ ಚರಂಡಿಯ ಕೊಳಚೆ ನೀರು ನೇರವಾಗಿ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಕೊಳವೆ ಬಾವಿಗೆ ಹರಿದು ಮಿಶ್ರಣಗೊಳ್ಳುತ್ತಿದೆ   

ಸಿದ್ದಾಪುರ: ಪಟ್ಟಣದ ಚರಂಡಿಯ ಕೊಳಚೆ ನೀರು ನೇರವಾಗಿ ಕುಡಿಯುವ ನೀರನ್ನು ಸರಬರಾಜು ಮಾಡುವ ಕೊಳವೆ ಬಾವಿಗೆ ಹರಿದು ಮಿಶ್ರಣಗೊಳ್ಳುತ್ತಿದ್ದು, ಕಳೆದ ಅನೇಕ ದಿನಗಳಿಂದ ಪಟ್ಟಣ ವ್ಯಾಪ್ತಿಯ ಜನತೆ ಕೊಳಚೆ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.

ಎರಡು ವಾರಗಳ ಹಿಂದೆ ಸುರಿಯುತ್ತಿದ್ದ ಭಾರಿ ಮಳೆಯ ಸಂದರ್ಭ ಗ್ರಾಮದ ಪ್ರತಿ ಮನೆಗಳಿಗೆ ಪಂಚಾಯಿತಿ ಆಡಳಿತವು ಅಳವಡಿಸಿದ್ದ ನಲ್ಲಿಯಲ್ಲಿ ಹಳದಿ ಮಿಶ್ರಿತ ದುವಾರ್ಸನೆಯಿಂದ ಕೂಡಿದ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಮಳೆಯಿಂದಾಗಿ ಕುಡಿಯುವ ನೀರು ಕಲುಷಿತಗೊಂಡಿದೆ ಎಂದು ತಿಳಿದಿದ್ದ ಗ್ರಾಮಸ್ಥರು ಈ ಬಗ್ಗೆ ಗ್ರಾಮ ಪಂಚಾಯತಿ ಆಡಳಿತದ ಗಮನಕ್ಕೆ ತಂದಿದ್ದರು. ಸಮಸ್ಯೆಯ ಮೂಲ ಅರಿಯದ ಆಡಳಿತ ಕೂಡ ಕೊಳವೆ ಬಾವಿಯಲ್ಲಿ ಮಳೆಯಿಂದಾಗಿ ಕೆಸರು ಮಿಶ್ರಿತ ನೀರು ಮಿಶ್ರಣಗೊಂಡಿದೆ ಎಂದು ಅಂದಾಜಿಸಿದ್ದರು.

ಆದರೆ ದಿನಗಳು ಉರುಳಿದಂತೆ ನಲ್ಲಿ ಮೂಲಕ ಸರಬರಾಜಾಗುತ್ತಿದ್ದ ಕುಡಿಯುವ ನೀರು ಹದಗೆಟ್ಟು ದುವಾರ್ಸನೆ ಬೀರಲಾರಂಭಿಸಿತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮೈಸೂರು ರಸ್ತೆಯಲ್ಲಿರುವ ಕೊಳವೆ ಬಾವಿಗೆ ಪಟ್ಟಣದ ಚರಂಡಿ ನೀರು ನೇರ ಹರಿಯುತ್ತಿರುವುದು ಕಂಡುಬಂದಿತ್ತು. ಕೊಳವೆ ಬಾವಿಯ ಮೇಲ್ಭಾಗ ನೆಲಕ್ಕೆ ಸಮವಾಗಿದ್ದು ಮತ್ತು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೇ ಇರುವುದು ಕುಡಿಯುವ ನೀರು ಮಲಿನಗೊಳ್ಳಲು ಕಾರಣವಾಗಿದೆ.

ADVERTISEMENT

ಗ್ರಾಮ ಪಂಚಾಯತಿ ಆಡಳಿತ ಮತ್ತು ಮೈಸೂರು ರಸ್ತೆ ವಾರ್ಡ್‌ ಸದಸ್ಯರು ಇತ್ತ ಗಮನಹರಿಸಿ ಗ್ರಾಮಸ್ಥರು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವ ಮುನ್ನ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಮೈಸೂರು ರಸ್ತೆ ನಿವಾಸಿ ಪ್ರತಾಪ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.