ಕೋಲಾರ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕರೂಪ ತೆರಿಗೆಯಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ’ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಾಜ್ಯ ವಲಯದ ಜಂಟಿ ಆಯುಕ್ತ ಬಿ.ವಿ. ಮುರಳಿಕೃಷ್ಣ ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಜಿಎಸ್ಟಿ ಕುರಿತು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಳೆ ತೆರಿಗೆ ವ್ಯವಸ್ಥೆಗೆ ಹೋಲಿಸಿದರೆ ಜಿಎಸ್ಟಿ ಜಾರಿ ನಂತರ ಕೆಲ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿದೆ ಎಂದು ಹೇಳಿದರು.
‘ಜಿಎಸ್ಟಿ ಜಾರಿಯಿಂದ ತೀವ್ರ ತೊಂದರೆಯಾಗುತ್ತದೆ. ಯಾವುದೇ ವಸ್ತು ಖರೀದಿಸಿದರೂ ತೆರಿಗೆ ಹೊರೆ ಹೆಚ್ಚಲಿದೆ ಎಂದು ಗ್ರಾಹಕರು ಭಾವಿಸಿದ್ದಾರೆ. ಜಿಎಸ್ಟಿ ಅನುಕೂಲಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ತೆರಿಗೆ ಪಾವತಿ ವಿಧಾನದಲ್ಲಿ ಹಿಂದಿನ ಮಾದರಿಯನ್ನೇ ಜಿಎಸ್ಟಿ ಪದ್ಧತಿಯಲ್ಲೂ ಮುಂದುವರಿಸಲಾಗುತ್ತಿದೆ’ ಎಂದು ತಿಳಿಸಿದರು.
ತಂತ್ರಜ್ಞಾನಕ್ಕೆ ಒತ್ತು: ‘ಕೇಂದ್ರ ಸರ್ಕಾರ ನೂತನ ವ್ಯವಸ್ಥೆಯಲ್ಲಿ ಸಂಪೂರ್ಣ ತಂತ್ರಜ್ಞಾನಕ್ಕೆ ಒತ್ತು ನೀಡಿದ್ದು, ಗ್ರಾಹಕರು ಮತ್ತು ವರ್ತಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಿಲ್ಲ. ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಾಗ ಸಮಸ್ಯೆಗಳು ಸಹಜ. ವರ್ತಕರು ಜಿಎಸ್ಟಿಯಡಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
ಈವರೆಗಿನ ವಾಹಿವಾಟಿನ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲು ಇನ್ನು ಕಾಲಾವಕಾಶವಿದೆ’ ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ತೆರಿಗೆ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಹೇಳಿದರು.
‘ಜಿಎಸ್ಟಿಗೆ ಸಂಬಂಧಪಟ್ಟ ಗೊಂದಲಗಳ ನಿವಾರಣೆಗಾಗಿ ಇಲಾಖೆಯು ಕೇಂದ್ರೀಕೃತ ಸಹಾಯವಾಣಿ ಆರಂಭಿಸಿದೆ. 080– 22342689 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಗೊಂದಲ ಪರಿಹರಿಸಿಕೊಳ್ಳಬಹುದು.
ವರ್ತಕರು ಆಯಾ ಜಿಲ್ಲೆಯ ಇಲಾಖಾ ಕಚೇರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಇಲಾಖೆ ನೆರವಿಗೆ ಸದಾ ಸಿದ್ಧವಾಗಿದೆ ಎಂದು ವಿವರಿಸಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಸುರೇಶ್, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಅಶೋಕ್ ಜಟ್ಟಣ್ಣವರ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.