ಬಂಗಾರಪೇಟೆ: ತಾಲ್ಲೂಕಿನ ಚಿನ್ನಕೋಟೆ ಪಂಚಾಯಿತಿಯ ದೇವಗಾನಹಳ್ಳಿ ಗ್ರಾಮದ ಬಳಿ ಕಸ ಸಂಸ್ಕರಣ ಘಟಕ ತೆರೆಯಲು ಮುಂದಾಗಿರುವ ಪಂಚಾಯಿತಿಯ ನಡೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ಸುಮಾರು 200 ಮೀಟರ್ ಸಮೀಪದಲ್ಲೇ ಸುಮಾರು 8 ಹಳ್ಳಿಗಳ ಕಸ ಸುರಿಯಲು ಪಂಚಾಯಿತಿ ಮುಂದಾಗಿದೆ. ಇದರಿಂದ ದುರ್ವಾಸನೆ ಅಲ್ಲದೆ ಸೊಳ್ಳೆ ಕಾಟ ಹೆಚ್ಚಾಗಲಿದೆ. ಸಮೀಪದಲ್ಲಿರುವ ನೀರಿನ ಮೂಲ ಮತ್ತು ಬೆಳೆಗಳ ಮೇಲೆ ವೆತಿರಿಕ್ತ ಪರಿಣಾಮ ಬೀರಲಿದೆ. ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಘಟಕ ತೆರೆಯುವ ಜಾಗದ ಸಮೀಪದಲ್ಲೇ ಓವರ್ ಹೆಡ್ ಟ್ಯಾಂಕ್ ಇದ್ದು, ಅಲ್ಲಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿದೆ. ಈಗಾಗಲೆ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ಮತ್ತಷ್ಟು ಬಿಗಡಾಯಿಸಲಿದೆ. ಅಲ್ಲದೆ ಅಲ್ಲಿಯೇ ಫಸಲು ಗಂಗಮ್ಮ ದೇಗುಲವಿದ್ದು, ಪೂಜೆ ನಡೆಸಲಾಗುತ್ತದೆ. ಘಟಕ ತೆರೆಯಕೂಡದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಕಸ ಕೂಡ ಇಲ್ಲಿಯೇ ಸುರಿಯಲಾಗುತ್ತದೆ ಎಂಬ ವದಂತಿ ಹಬ್ಬಿದ್ದರಿಂದ ಪ್ರತಿಭಟನೆ ಮತ್ತಷ್ಟು ಕಾವು ಪಡೆಯಿತು. ಜಿಲ್ಲಾ ಪಂಚಾಯಿತಿ ಎಂಜಿನಿಯರ್ ರವಿಚಂದ್ರ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ್ ಅವರು ಸ್ಥಳಕ್ಕೆ ಧಾವಿಸಿ, ಗ್ರಾಮದಿಂದ ಮತ್ತಷ್ಟು ದೂರಕ್ಕೆ ಘಟಕ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.