ADVERTISEMENT

ಕೋಲಾರ: ಅಬಕಾರಿ ಇಲಾಖೆ ಜಿಲ್ಲಾ ಕಚೇರಿ ಉಪಾಧೀಕ್ಷಕ ವೈ.ಭರತೇಶ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 7:22 IST
Last Updated 24 ಡಿಸೆಂಬರ್ 2017, 7:22 IST
ಕೋಲಾರ: ಅಬಕಾರಿ ಇಲಾಖೆ ಜಿಲ್ಲಾ ಕಚೇರಿ ಉಪಾಧೀಕ್ಷಕ ವೈ.ಭರತೇಶ್‌ ಅಮಾನತು
ಕೋಲಾರ: ಅಬಕಾರಿ ಇಲಾಖೆ ಜಿಲ್ಲಾ ಕಚೇರಿ ಉಪಾಧೀಕ್ಷಕ ವೈ.ಭರತೇಶ್‌ ಅಮಾನತು   

ಕೋಲಾರ: ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕರ್ತವ್ಯಕ್ಕೆ ಗೈರಾಗಿದ್ದ ಆರೋಪದ ಮೇಲೆ ಅಬಕಾರಿ ಇಲಾಖೆ ಜಿಲ್ಲಾ ಕಚೇರಿ ಉಪಾಧೀಕ್ಷಕ ವೈ.ಭರತೇಶ್‌ ಅವರನ್ನು ಅಮಾನತು ಮಾಡಿ ಇಲಾಖೆ ಆಯುಕ್ತ ಮಂಜುನಾಥ ನಾಯಕ್‌ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಭರತೇಶ್‌ ಅವರನ್ನು ಆಗಸ್ಟ್‌ನಲ್ಲಿ ಕೋಲಾರಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರು ಅನಾರೋಗ್ಯದ ಕಾರಣ ನೀಡಿ ಸುಮಾರು ಎರಡು ತಿಂಗಳು ವೈದ್ಯಕೀಯ ರಜೆ ಪಡೆದಿದ್ದರು.

ವೈದ್ಯಕೀಯ ರಜೆ ಪೂರ್ಣಗೊಂಡ ನಂತರ ಅವರು ಆಗೊಮ್ಮೆ ಈಗೊಮ್ಮೆ ಕಚೇರಿಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಹೋಗುತ್ತಿದ್ದರು. ಕರ್ತವ್ಯಕ್ಕೆ ಸತತ ಗೈರಾದರೂ ಸಂಬಳ ಪಡೆದು ಬೆಂಗಳೂರಿನಲ್ಲಿ ಇದ್ದುಕೊಂಡು ಬಡ್ತಿಗೆ ಪ್ರಯತ್ನ ನಡೆಸಿದ್ದರು. ಈ ಸಂಬಂಧ ಸುದ್ದಿ ವಾಹಿನಿಯೊಂದು ಇತ್ತೀಚೆಗೆ ಸುದ್ದಿ ಪ್ರಸಾರ ಮಾಡಿತ್ತು.

ADVERTISEMENT

ಆ ನಂತರ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರು ಭರತೇಶ್‌ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಸಚಿವರ ಆದೇಶದಂತೆ ಇಲಾಖೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದಾಗ ಭರತೇಶ್‌ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿರುವುದು ದೃಢಪಟ್ಟಿತ್ತು. ಈ ಬಗ್ಗೆ ಅಧಿಕಾರಿಗಳು ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಆ ವರದಿ ಆಧರಿಸಿ ಆಯುಕ್ತರು ಭರತೇಶ್‌ರನ್ನು ಅಮಾನತು ಮಾಡಿ ಶನಿವಾರ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.