ಶ್ರೀನಿವಾಸಪುರ: ‘ಆಗಸ್ಟ್ ಕೊನೆಯ ವೇಳೆಗೆ ಜಿಲ್ಲೆಯನ್ನು ಬಯಲು ಬಹಿರ್ದೆಸೆಯಿಂದ ಮುಕ್ತಗೊಳಿಸಲು ನಾಗರಿಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಹಕರಿಸಬೇಕು’ ಎಂದು ಜಿಲ್ಲಾ ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಕೋಡಿಪಾಳ್ಯ ಕೃಷ್ಣಪ್ಪ ಮನವಿ ಮಾಡಿದರು.
ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ಶೌಚಾಲಯ ಕಟ್ಟಡ ಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
‘ತಾಲ್ಲೂಕಿನ 25 ಗ್ರಾಮ ಪಂಚಾ ಯಿತಿಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಿಗದಿತ ಸಮಯದೊಳಗೆ ಉದ್ದೇಶಿತ ಕಾರ್ಯ ಪೂರ್ಣಗೊಳ್ಳಬೇಕು. ಸ್ವಚ್ಛ ಭಾರತ್ ಉದ್ದೇಶ ಸಾಕಾರಗೊಳ್ಳಬೇಕು’ ಎಂದು ಹೇಳಿದರು.
‘ಶೌಚಾಲಯ ನಾಗರಿಕತೆ ಸಂಕೇತ. ಮನೆಯಲ್ಲಿ ಶೌಚಾಲಯ ಇರುವುದು ಹೆಮ್ಮೆಯ ಸಂಗತಿ. ಇದನ್ನು ಸಾರ್ವಜ ನಿಕರು ಮನಗಾಣಬೇಕು. ಶೌಚಾಲಯ ನಿರ್ಮಿಸಿ ಬಳಸಬೇಕು. ರೋಗ ರುಜಿನ ದಿಂದ ಮುಕ್ತವಾಗಬೇಕು’ ಎಂದರು.
ನಂತರ ತಾಲ್ಲೂಕಿನ ಜೆ.ವಿ.ಕಾಲೊನಿ, ಪಾತಪಲ್ಲಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಶೌಚಾಲಯ ನಿರ್ಮಾಣದ ಪ್ರಗತಿ ವೀಕ್ಷಿಸಿದರು.
ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ‘ಆಗಸ್ಟ್ ಒಳಗೆ ಪ್ರತಿ ಮನೆಯಲ್ಲೂ ಶೌಚಾಲಯ ಇರುವಂತೆ ನೋಡಿಕೊಳ್ಳಬೇಕು. ವಿದ್ಯಾವಂತ ಸಮುದಾಯ ಶೌಚಾಲಯದ ಮಹತ್ವ ಕುರಿತು ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸಬೇಕು. ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರವೀಂದ್ರ, ಪಿಡಿಒ ರಾಮಪ್ಪ, ಕಾರ್ಯದರ್ಶಿ ನಾರಾಯಣಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.