ಕೆಜಿಎಫ್: ಮತದಾನ ನಡೆಯುವ ಮೊದಲೇ ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಮನನ ಮಾಡಿಕೊಂಡಿರಬೇಕು ಎಂದು ಪ್ರೊಬೇಷನರಿ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಹೇಳಿದರು.
ರಾಬರ್ಟಸನ್ಪೇಟೆಯಲ್ಲಿ ಭಾನುವಾರ ನಡೆದ ಮತಗಟ್ಟೆ ಅಧಿಕಾರಿಗಳ ಮೊದಲನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣೆ ದಿನದಂದು ಮತಗಟ್ಟೆಗೆ ಬರುವ ಪೊಲೀಂಗ್ ಏಜೆಂಟರ್ ಸಾಕಷ್ಟು ಮಾಹಿತಿ ಪಡೆಯಲು ಇಚ್ಛಿಸುತ್ತಾರೆ. ಅವರಿಗೆ ಸಮಾಧಾನವಾಗುವ ರೀತಿಯಲ್ಲಿ ಎಲ್ಲ ನಿಯಮ ತಿಳಿದುಕೊಂಡು ವಿವರಿಸಬೇಕಾಗುತ್ತದೆ. ಮತದಾನ ಯಂತ್ರ ಮತ್ತು ವಿವಿ ಪ್ಯಾಟ್ ಬಗ್ಗೆ ಕೂಡ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಚುನಾವಣೆಗೆ ಮೊದಲು ಎಲ್ಲ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆ ನಿಯಮಗಳ ಬಗ್ಗೆ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ಎದುರಿಸಲು ಯಾವುದೇ ಸಂಕೋಚ ಮತ್ತು ಭಯ ಬೇಡ. ಚುನಾವಣೆಗೆ ಎಲ್ಲರೂ ಸಮರ್ಪಕವಾಗಿ ಸಿದ್ಧರಾಗಬೇಕು ಎಂಬ ಕಾರಣದಿಂದ ಪರೀಕ್ಷೆ ನಡೆಸಲಾಗುವುದು ಎಂದರು.
ಚುನಾವಣಾಧಿಕಾರಿ ಸುರೇಶ್ ಮಾತನಾಡಿ, ಪಟ್ಟಿಯಲ್ಲಿರುವ ಎಲ್ಲರೂ ಚುನಾವಣೆ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಯಾವುದೇ ಸಾಬೂಬು ಹೇಳದೆ ತಪ್ಪಿಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಸಾಮೂಹಿಕ ಜವಾಬ್ದಾರಿ ಹೊಂದಬೇಕು. ಮೊದಲು ಚುನಾವಣೆಯಲ್ಲಿ ಭಾಗವಹಿಸುವವರು ಆತಂಕ ಪಡದೆ, ಮಾರ್ಗಸೂಚಿ ಪುಸ್ತಕದ ಪ್ರತಿ ಪುಟವನ್ನು ಓದಬೇಕು. ಜತೆಗೆ ಸಿಬ್ಬಂದಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸಹಾಯಕ ಚುನಾವಣಾಧಿಕಾರಿ ವಿ.ಎಸ್.ವೆಂಕಟೇಶ್, ನೂಡಲ್ ಅಧಿಕಾರಿ ವೆಂಕಟಸ್ವಾಮಿ, ನಗರಸಭೆ ಆಯುಕ್ತ ಆರ್.ಶ್ರೀಕಾಂತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.