ಶ್ರೀನಿವಾಸಪುರ: ಪಟ್ಟಣದ ಸುತ್ತ ಮುತ್ತ ಶುಕ್ರವಾರ ಮಧ್ಯಾಹ್ನ ಜೋರು ಮಳೆ ಸುರಿಯಿತು. ಅದರಿಂದ ರಾಗಿ ತೆಗೆ ಕಟಾವಿಗೆ ಅಡ್ಡಿ ಉಂಟಾಯಿತು. ಕಳೆದ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಮಳೆ ಬರುವ ಸೂಚನೆ ಇರಲಿಲ್ಲ.
ಹಾಗೆಂತಲೇ ರೈತರು ರಾಗಿ ತೆನೆ ಕಟಾವು ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಮೋಡ, ಬಿಸಿಲಿನ ಆಟ ನಡೆದಿತ್ತು. ಆದರೆ ಅನಿರೀಕ್ಷತವಾಗಿ ಹನಿ ಶುರುವಾಯಿತು. ಕೊಯ್ದ ತೆನೆ ರಕ್ಷಣೆಗೆ ಪರದಾಡಬೇಕಾಯಿತು.
ಬಯಲಿನಲ್ಲಿ ಒಣಗಲು ಹಾಕಿದ್ದ ತೆನೆಯನ್ನು ರಾಶಿ ಮಾಡುತ್ತಿದ್ದಂತೆ ಮಳೆ ಧೋ ಎಂದು ಸುರಿಯಿತು. ಅಲ್ಲಲ್ಲಿ ತೆನೆ ನೆನೆಯಿತು. ಅನಿರೀಕ್ಷಿತ ಮಳೆ ಮಾಡಿದ ಅವಾಂತರಕ್ಕೆ ರೈತರು ಶಪಿಸಿದರು. ತೆನೆಯ ಮೇಲೆ ಪ್ಲಾಸ್ಟಿಕ್ ಹಾಳೆ ಹಾಕಿ ಮಳೆಯಿಂದ ರಕ್ಷಣೆ ನೀಡಿದರು. ಹೊಲಕ್ಕೆ ಹೋದವರು ಮಳೆಯಲ್ಲಿ ನೆನೆದು ಮನೆಗೆ ಬಂದರು.
ಮಳೆ ಉಂಟುಮಾಡಿದ ಅವಾಂತರ ಏನೇ ಆದರೂ, ಹಿಂದೆ ಬಿತ್ತಲಾಗಿದ್ದ ಬೆಳೆಗಳಿಗೆ ಈ ಮಳೆ ಸಹಾಯಕವಾಗಿದೆ. ಅವರೆ, ಹುರಳಿ, ತೊಗರಿ ಬೆಳೆಗೆ ಹೆಚ್ಚಿನ ಅನುಕೂಲವಾಗಿದೆ ಎಂದು ನಲ್ಲಪ್ಪಲ್ಲಿ ಗ್ರಾಮದ ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.