ADVERTISEMENT

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 8:40 IST
Last Updated 7 ಮಾರ್ಚ್ 2017, 8:40 IST
ಗೌರಿಬಿದನೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರ್ಥಿಕ ನೀತಿಗಳಿಂದ ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ವಿ. ಶ್ರೀರಾಮರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
 
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ 17ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಸ್ವಾಗತ ಸಮಿತಿ ರಚನೆಯ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿ ಏಪ್ರಿಲ್ 12 ಮತ್ತು 13ರಂದು ಎರಡು ದಿನಗಳ ಕಾಲ ಜಿಲ್ಲಾ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಸಮ್ಮೇಳನಸಲ್ಲಲಿ ರೈತರ  ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. 
 
ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬೆಳೆಯಿಲ್ಲದ ರೈತರು ತೀವ್ರ ಸಮಸ್ಯೆಗೆ ಸಿಲುಕಿ ನರಳುವಂತಾಗಿದೆ. ರೈತರ ಸಾಲ ಮನ್ನಾ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಒಬ್ಬರ ಮೇಲೊಬ್ಬರು ಆರೋಪ ಮಾಡಿ ಕಾಲ ಕಳೆಯುತ್ತಿದ್ದಾರೆ. ಡಾ. ಸ್ವಾಮಿನಾಥನ್ ವರದಿ ಪ್ರಕಾರ ರೈತರು ಬೆಳೆ ತೆಗೆಯಲು ಎಷ್ಟು ಬಂಡವಾಳ ಹೂಡುತ್ತಾರೆ ಅದರ ಎರಡರಷ್ಟು ರೈತರು ಬೆಳೆಯುವ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ವರದಿ ಸಲ್ಲಿಸಿದರೂ ಜಾರಿಯಾಗಿಲ್ಲ ಎಂದು ತಿಳಿಸಿದರು.
 
ಬೀದರ್, ಕಲಬುರ್ಗಿ ಜಿಲ್ಲೆಗಳಲ್ಲಿ ರೈತರು ಬೆಳೆದಿರುವ ತೊಗರಿಗೆ ಬೆಂಬಲ ಬೆಲೆ ನೀಡದೆ ದಕ್ಷಿಣ ಆಫ್ರಿಕಾದಿಂದ ಅಮದು ಮಾಡಿಕೊಳ್ಳಲಾಗುತ್ತಿದೆ. ರೈತರ ಜಮೀನುಗಳನ್ನು ಕಿತ್ತು ಬಂಡವಾಳಶಾಹಿಗಳ ಕೈಗೆ ನೀಡಲಾಗುತ್ತಿದೆ. ಅಹಮದಾಬಾದ್ ನಿಂದ ಬೆಂಗಳೂರು ಮಾರ್ಗವಾಗಿ ಚನ್ನೈಗೆ ನಿರ್ಮಾಣವಾಗುವ ನೈಸ್ ರಸ್ತೆಗೆ ರೈತರಿಂದ 7.40 ಸಾವಿರ ಚದರ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
 
ಸಮ್ಮೇಳನಕ್ಕೆ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಚಂದ್ರಣ್ಣ, ಉಪಾಧ್ಯಕ್ಷರಾಗಿ ಸಿ.ಸಿ. ಅಶ್ವತ್ಥಪ್ಪ, ಕಾರ್ಯದರ್ಶಿ ರಾಜು, ಮಂಜುನಾಥ್, ಖಜಾಂಚಿ ಎನ್.ಆರ್. ರವಿಚಂದ್ರರೆಡ್ಡಿ ಅವರನ್ನು ಆಯ್ಕೆಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.