ಕೋಲಾರ: ‘ವಿರೋಧಿಗಳ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮತ ದಾರರ ಋಣ ತೀರಿಸುವುದೇ ನಮ್ಮ ಪ್ರಥಮ ಅದ್ಯತೆ’ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಅಣ್ಣಿಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು, ‘ಜಾತಿ, ಧರ್ಮದ ಎಲ್ಲೆ ಮೀರಿ ಕ್ಷೇತ್ರದ ಜನರು ನನಗೆ ಮತ ನೀಡಿದ್ದಾರೆ. ಅವರ ಋಣ ತೀರಿಸುವುದೇ ನನ್ನ ಪ್ರಥಮ ಆದ್ಯತೆ’ ಎಂದರು.
‘ಮುಂದಿನ ಚುನಾವಣಾ ದೃಷ್ಟಿಯಿಂದ ಕೆಲಸ ಮಾಡುತ್ತಿಲ್ಲ. ಮತದಾರರ ಋಣ ತೀರಿಸುವ ಹೊಣೆ ನನ್ನ ಮೇಲಿದೆ. ಅದನ್ನು ಮಾಡುತ್ತಿದ್ದೇನೆ. ನಿಮ್ಮ ಕಷ್ಟಗಳಿಗೆ ಸದಾ ಸ್ಪಂದಿಸುತ್ತೇನೆ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜನರಿಂದ ಮನವಿ ಸ್ವೀಕರಿಸಿದ್ದೇನೆ. ಮೂರು ತಿಂಗಳಲ್ಲಿ ಸಮಸ್ಯೆಗಳನ್ನು ನಿವಾರಿಸಿ ನಂತರ ಗ್ರಾಮಗಳಿಗೆ ಭೇಟಿ ನೀಡುತ್ತೇನೆ’ ಎಂದರು.
‘ಮೂರು ತಿಂಗಳಲ್ಲಿ ಪ್ರತಿ ಗ್ರಾಮಕ್ಕೂ ಸಿಮೆಂಟ್ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ ಕಲ್ಪಿಸಿಕೊಡಲಾಗುವುದು. ಈಗಾಗಲೇ ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರಿ ಕೂಡಲೇ ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.
‘ವಿಧಾನಸಭಾ ಕ್ಷೇತ್ರದ ಮಹಿಳೆಯರಿಗೆ ಶೂನ್ಯ ಬಡ್ಡಿದರದ ಸಾಲ ತಲುಪಿಸಲು ಗುರಿ ಹೊಂದಿದ್ದೇನೆ. ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕನ್ನು ಬ್ಯಾಲಹಳ್ಳಿ ಗೋವಿಂದಗೌಡರ ತಂಡ ಕಷ್ಟಪಟ್ಟು ಬದ್ದತೆಯಿಂದ ಮತ್ತೆ ಪುನಶ್ಚೇತನಗೊಳಿಸಿದೆ. ಅವರ ಪ್ರಯತ್ನದಿಂದ ಇದೀಗ ಮತ್ತೆ ಸ್ತ್ರೀಶಕ್ತಿ ಸಂಘಗಳಿಗೆ ಮತ್ತು ರೈತರಿಗೆ ಶೂನ್ಯಬಡ್ಡಿ ಸಾಲ ಸೌಲಭ್ಯ ಒದಗಿಸುವ ಶಕ್ತಿ ಬಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಪಡಿತರ ಚೀಟಿ, ದರಖಾಸ್ತು ಜಮೀನು ಮಂಜೂರು, ವೃದ್ಧಾಪ್ಯ, ವಿಧವಾ ಮಾಸಾಶನಕ್ಕಾಗಿ ಗ್ರಾಮಸ್ಥರಿಂದ ಮನವಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಕೋಚಿಮುಲ್ ಅಧ್ಯಕ್ಷ ಬ್ಯಾಟಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಆಂಜಿನಪ್ಪ, ಸದಸ್ಯ ಮುರಳೀಧರ ಇದ್ದರು.
ಫ್ಲೋರೈಡ್ ನೀರು ಸೇವನೆ ಯಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಶುದ್ಧ ನೀರಿನ ಘಟಕ ಸ್ಥಾಪನೆ ಕೈಗೆತ್ತಿಕೊಂಡಿದ್ದೇನೆ. ಉಳಿದ ಗ್ರಾಮಗಳಿಗೂ 3 ತಿಂಗಳ ಒಳಗೆ ಘಟಕ ಮಂಜೂರು ಮಾಡಿಸುತ್ತೇನೆ.
ರಮೇಶ್ ಕುಮಾರ್, ಸಚಿವ