ಕೋಲಾರ: ‘ನಮ್ಮ ಕಾಂಗ್ರೆಸ್’ ಪಕ್ಷ ಸ್ಥಾಪನೆ ಸಂಬಂಧ ಶಾಸಕ ವರ್ತೂರು ಪ್ರಕಾಶ್, ನಗರದಲ್ಲಿ ಮಂಗಳವಾರ ಕರೆದಿದ್ದ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಬಾಡೂಟಕ್ಕಾಗಿ ನೂಕು ನುಗ್ಗಲು ಉಂಟಾಯಿತು.
ಸಭೆಗೆ ಸುಮಾರು ಒಂದು ಸಾವಿರ ಕಾರ್ಯಕರ್ತರು ಸೇರಬಹುದೆಂದು ನಿರೀಕ್ಷಿಸಿದ್ದ ಶಾಸಕರು 500 ಕೆ.ಜಿ ಕುರಿ ಮಾಂಸ ತರಿಸಿ ಮಧ್ಯಾಹ್ನದ ಊಟಕ್ಕೆ ಬಿರಿಯಾನಿ ಮತ್ತು ಮೊಸರು ಬಜ್ಜಿ ವ್ಯವಸ್ಥೆ ಮಾಡಿಸಿದ್ದರು.
ಆದರೆ, ಅವರ ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡರು. ಸಭೆ ಮುಗಿಯುತ್ತಿದ್ದಂತೆ ಕಾರ್ಯಕರ್ತರು ಬಿರಿಯಾನಿ ತೆಗೆದುಕೊಳ್ಳಲು ಮುಗಿಬಿದ್ದರು. ಇದರಿಂದ ತಳ್ಳಾಟವಾಗಿ ಹಲವರು ಗಾಯಗೊಂಡರು. ಸಾಕಷ್ಟು ಮಂದಿಗೆ ಬಿರಿಯಾನಿ ಸಿಗದೆ ಶಾಸಕರನ್ನು ಶಪಿಸುತ್ತಾ ಮನೆಯತ್ತ ಹೆಜ್ಜೆ ಹಾಕಿದರು.
ವರ್ತೂರು ಪ್ರಕಾಶ್ ಟಿಪ್ಪು ಜಯಂತಿ ಆಚರಣೆ ಸಂಬಂಧ ಇತ್ತೀಚೆಗೆ ಮುಸ್ಲಿಂ ಮುಖಂಡರ ಸಭೆ ನಡೆಸಿದಾಗಲೂ ಬಾಡೂಟ ಆಯೋಜಿಸಿದ್ದರು. ಆಗಲೂ ನೂಕು ನುಗ್ಗಲು ಉಂಟಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.