ADVERTISEMENT

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹ

ಶ್ರೀನಿವಾಸಪುರ ಹೊರ ವಲಯದ ಎಪಿಎಂಸಿ ಪ್ರಾಂಗಣದಲ್ಲಿ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:26 IST
Last Updated 20 ಮಾರ್ಚ್ 2017, 5:26 IST

ಶ್ರೀನಿವಾಸಪುರ: ಪಟ್ಟಣದ ಹೊರ ವಲಯದ ಎಪಿಎಂಸಿ ಪ್ರಾಂಗಣದಲ್ಲಿ ಸ್ಥಾಪಿಸಲಾಗಿರುವ ಶುದ್ಧ ನೀರು ಘಟಕ ಕಾರ್ಯ ನಿರ್ವಹಿಸದ ಪರಿಣಾಮವಾಗಿ, ಅಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರಾಂಗಣಕ್ಕೆ ಉತ್ಪನ್ನ ತರುವ ರೈತರು, ಟೊಮೆಟೊ ಹಾಗೂ ಮಾವಿನ ಕಾಯಿ ಮಂಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ₹ 5 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಘಟಕವನ್ನು ಸ್ಥಾಪಿಸಲಾಗಿದೆ. ಸ್ಥಾಪನೆ ಮಾಡಿ ಒಂದು ವರ್ಷವಾಗಿದೆ.

ಉದ್ಘಾಟನೆ ಮಾಡಿದ ಮೇಲೆ ಒಂದೆರಡು ದಿನಗಳ ಕಾಲ ಮಾತ್ರ ನೀರು ಸಿಕ್ಕಿತು. ಆನಂತರ ಸ್ಥಗಿತಗೊಂಡಿತು ಎಂದು ಮಂಡಿ ಕಾರ್ಮಿಕ ಆಚಾರಿ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

  ಶುದ್ಧ ಕುಡಿಯುವ ನೀರು ಘಟಕಕ್ಕೆ ನೀರು ಪೂರೈಸಲು ನಿರ್ಮಿಸಲಾಗಿರುವ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿದೆ. ಆದರೆ ಎಪಿಎಂಸಿ ಅಧಿಕಾರಿಗಳು ಕೆಟ್ಟುಹೋಗಿರುವ ನೀರು ಸಂಸ್ಕರಣ ಯಂತ್ರವನ್ನು ದುರಸ್ತಿ ಮಾಡಿಸುತ್ತಿಲ್ಲ. ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಅಶುದ್ಧ ನೀರು ಸೇವಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಕಾರ್ಮಿಕರ ಅಳಲು.

ಮಾರುಕಟ್ಟೆ ಬಳಕೆಗಾಗಿ ಪ್ರಾಂಗಣದ ಗೇಟ್‌ ಸಮೀಪ ವಿಧಾನ ಪರಿಷತ್‌ ಸದಸ್ಯರ ಅನುದಾನದಿಂದ ಹೈಮಾಸ್ಟ್‌ ದೀಪವನ್ನು ಅಳವಡಿಸಲಾಗಿದೆ. ಆದರೆ ಎಪಿಎಂಸಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದರ ಬಳಕೆಯಾಗುತ್ತಿಲ್ಲ. ಸೌಲಭ್ಯವಿದ್ದರೂ, ಕತ್ತಲೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದರು.

  ಮಾರುಕಟ್ಟೆಗೆ ಬರುವ ರೈತರು, ವ್ಯಾಪಾರಿಗಳು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಘಟಕಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮರು ಚಾಲನೆ ನೀಡಬೇಕು. ಹೈಮಾಸ್ಪ್‌ ದೀಪ ಬೆಳಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.