ಹನುಮಸಾಗರ: ಇಲ್ಲಿನ ಅನ್ನದಾನೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಲ್ಲಿ ನಡೆಯಿತು. ಜಾತ್ರಾಮಹೋತ್ಸವದ ಕೊನೆಯ ದಿನವಾದ ಬುಧವಾರ ಗುರು ಅನ್ನದಾನೇಶ್ವರ ಶ್ರೀಗಳ ಭಾವಚಿತ್ರವಿದ್ದ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಕರ್ತ ಗದ್ದುಗೆಗೆ ರುದ್ರಾಭಿಷೇಕ, ಮಹಾ ಮಂಗಳಾರತಿ, ಮಹಾ ಗಣರಾಧನೆ, ಪುಷ್ಪಾಲಂಕಾರದಂತಹ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು.
ಬಳಿಕ ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿದ್ದ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಪೂಜೆ ಸಲ್ಲಿಸಿ ಹಾಲಕೇರಿ ಅಭಿನವ ಅನ್ನದಾನ ಸ್ವಾಮೀಜಿ ಮಹೋತ್ಸವಕ್ಕೆ ಚಾಲನೆ ನೀಡಿದರು. ಅನ್ನದಾನೇಶ್ವರ ಮಠದಿಂದ ಆರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿವಿಧ ಭಜನಾ ತಂಡಗಳು, ಪುರುವಂತರರು, ಕರಡಿ ಮಜಲು, ಕಳಸ ಹಿಡಿದ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ಹೊರಟ ಅಡ್ಡಪಲ್ಲಕ್ಕಿ, ನಾನಾ ಬೀದಿಗಳ ಮೂಲಕ ಸಂಚರಿಸಿ ಸಾಯಂಕಾಲ ಅನ್ನದಾನೇಶ್ವರ ಮಠ ತಲುಪಿತು. ಶ್ರೀಮಠದಲ್ಲಿ ಒಂದು ತಿಂಗಳಿನಿಂದ ಸಾಗಿ ಬಂದಿದ್ದ ಆಧ್ಯಾತ್ಮ ಪ್ರವಚನ ಮಹಾಮಂಗಲೋತ್ಸವ ನಡೆಯಿತು.
ಮುಖಂಡರಾದ ಶರಣಪ್ಪ ಅಗಸಿಮುಂದಿನ, ಸಂಗಯ್ಯಜ್ಜ ವಸ್ತ್ರದ, ಬಸವಂತಪ್ಪ ಕಂಪ್ಲಿ, ಮಹಾಂತೇಶ ಅಗಸಿಮುಂದಿನ, ರಾಚಪ್ಪ ಚಿನಿವಾಲರ, ಮಹಾಂತಪ್ಪ ಚಿನಿವಾಲರ, ಶಿವಪ್ಪ ಕಂಪ್ಲಿ, ಶ್ರೀಶೈಲ ಮೋಟಗಿ, ಪ್ರಭುದೇವ ಬ್ಯಾಳಿ, ಬಸವರಾಜ ಹಳ್ಳೂರ, ಬಸವರಾಜ ದ್ಯಾವಣ್ಣವರ, ಶೇಖಪ್ಪ ದೋಟಿಹಾಳ, ಅಂದಾನಯ್ಯ ಸೊಪ್ಪಿಮಠ, ಮಹಾಂತಯ್ಯ ಕೋಮಾರಿ, ಮಲ್ಲಯ್ಯ ಕೋಮಾರಿ, ಕರಿಸಿದ್ದಪ್ಪ ಕುಷ್ಟಗಿ, ಡಾ.ವಿ.ಬಿ.ಹಿರೇಮಠ, ಸಜ್ಜನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.