ಕುಷ್ಟಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಈ ವರ್ಷವೂ ಕೂಡ ಬರಪೀಡಿತ ಪ್ರದೇಶಗಳಲ್ಲಿನ ಕೆರೆಗಳ ಹೂಳು ತೆಗೆಯುವ ಯೋಜನೆ ರೂಪಿಸಲಾಗಿದೆ ಎಂದು ಸಂಸ್ಥೆ ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ವಿಭಾಗದ ನಿರ್ದೇಶಕ ಪಿ.ಗಂಗಾಧರ ರೈ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ ಗುಡ್ಡದದೇವಲಾಪುರ ಗ್ರಾಮದಲ್ಲಿ ಕೈಗೊಳ್ಳಲಾಗಿರುವ ಕೆರೆ ಹೂಳು ತೆಗೆಯುವ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಹೂಳು ತೆಗೆಯುವುದರಿಂದ ಮಳೆಯಾದಾಗ ಕೆರೆ ತುಂಬಿ ಅಂತರ್ಜಲ ಹೆಚ್ಚಳವಾಗುತ್ತದೆ. ಪ್ರಾಣಿ, ಪಕ್ಷಿಗಳು, ಜಲಚರಗಳಿಗೆ ನೀರಿನ ಆಸರೆ ಆಗಲಿದೆ. ಕಳೆದ ವರ್ಷ ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ತಾಲ್ಲೂಕಿಗೆ ಒಂದರಂತೆ ಕೆರೆಗಳ ಹೂಳು ತೆಗೆಯುವ ಕೆಲಸ ನಡೆಸಲಾಗಿತ್ತು. ಈ ಬಾರಿಯೂ ಅಂಥ ಕೆಲಸ ತೆಗೆದುಕೊಳ್ಳುವ ಮೂಲಕ ಸಂಸ್ಥೆ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ’ ಎಂದು ಹೇಳಿದರು.
ಜೀಗೇರಿಯ ಗುರುಸಿದ್ದ ಸ್ವಾಮೀಜಿ ಭೂಮಿಪೂಜೆ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಶೇಖರಗೌಡ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಶಿನಾಥ ಸಾರಂಗಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನಮಮ್ಮ ಮುಶಿಗೇರಿ, ಸಂಗಮೇಶ ಸಾರಂಗಮಠ, ವಿಜಯಲಕ್ಷ್ಮೀ ಹಿರೇಮಠ, ತಾಲ್ಲೂಕು ಯೋಜನಾಧಿಕಾರಿ ವಿನಾಯಕ ನಾಯಕ, ಕೃಷಿ ಮೇಲ್ವಿಚಾರಕ ನಾಗರಾಜ ಉಪ್ಪಾರ, ಒಕ್ಕೂಟ ಅಧ್ಯಕ್ಷ, ಸಂಸ್ಥೆಯ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.