ಕುಕನೂರು: ಇಲ್ಲಿನ ಮಹಾಮಾಯೆ ದೇವಸ್ಥಾನ 9ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ದೇವಸ್ಥಾನದ ಆವರಣದಲ್ಲಿ ನವಲಿಂಗೇಶ್ವರ ಸೇರಿ ದಂತೆ ಒಂಬತ್ತು ಶಿವಾಲಯಗಳಿವೆ. ಇಂತಹ ಅಪರೂಪದ ದೇವಸ್ಥಾನವನ್ನು ಸಂರಕ್ಷಿಸಬೇಕಾದ ಪುರಾತತ್ವ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಇದರಿಂದಾಗಿ ದೇವಸ್ಥಾನ ಆವರಣ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮೇಲಾಗಿ ಮಹಾಮಾಯೆ ದೇವಸ್ಥಾನದ ಕಲ್ಯಾಣ ಮಂಟಪದ ಊಟದ ಎಲೆ, ಪ್ಲಾಸ್ಟಿಕ್ ಲೋಟ ಸೇರಿದಂತೆ ಮತ್ತಿತರ ತ್ಯಾಜ್ಯವನ್ನು ದೇವಾಲಯದ ಹಿಂಭಾಗ ದ ಕಟ್ಟಡದ ಸಮೀಪ ಹಾಕಿ ಬೆಂಕಿ ಹಚ್ಚಲಾಗುತ್ತದೆ. ಇದರಿಂದ ದೇವಸ್ಥಾನ ಕ್ಕೆ ಹಾನಿ ಆಗುವ ಅಪಾಯವಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಶಿವರಾತ್ರಿ ವೇಳೆ ಎಲ್ಲ ಶಿವಾಲಯಗಳಲ್ಲಿ ಜಪ-ತಪ ನಡೆಯುತ್ತದೆ. ಅನುಕೂಲಸ್ಥರು ದ್ವಾದಶ ಜ್ಯೋತಿರ್ಲಿಂಗಗಳ ದರ್ಶನಕ್ಕೆ ತೆರಳುತ್ತಾರೆ. ಆದರೆ, ಆರ್ಥಿಕವಾಗಿ ಹಿಂದುಳಿದವರು ದ್ವಾದಶ ಜ್ಯೋತಿ ರ್ಲಿಂಗಗಳ ದರ್ಶನ ಪಡೆಯುವುದು ಕಷ್ಟ. ಹಾಗಾಗಿ ಮಹಾಮಾಯೆ ದೇವಸ್ಥಾನಕ್ಕೆ ಬರುತ್ತಾರೆ.
ದೇವಸ್ಥಾನ ವೀಕ್ಷಣೆಗೆ ಬಂದವರು ಗೋಡೆಗಳ ಮೇಲೆ ಹೆಸರುಗಳನ್ನು ಬರೆದಿದ್ದಾರೆ. ಅಲ್ಲದೆ, ಆವರಣದಲ್ಲಿ ಸ್ವಚ್ಛತೆ ಇಲ್ಲ. ದೇವಸ್ಥಾನದ ಒಳಗೆ ದೀಪದ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರವಾಸಿಗರು ಮೋಬೈಲ್ ಟಾರ್ಚ, ಬ್ಯಾಟರಿಗಳ ಸಹಾಯದಿಂದ ದೇವಸ್ಥಾನವನ್ನು ವೀಕ್ಷಿಸಬೇಕಾಗಿದೆ.
ನವಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀತ್ರಯಂಬಕೇಶ್ವರ, ಕಾಶೀ ವಿಶ್ವನಾಥ, ಸೋಮನಾಥ, ಕೇದರನಾಥ, ಭೀಮಶಂಕರ್, ರಾಮೇಶ್ವರ, ಪೊಷ್ಮೇಶ್ವರ, ಮಹಾ ಕಾಲೇಶ್ವರ ಮತ್ತು ಮಾರ್ಕಂಡೇಶ್ವರ ಎಂಬ ಒಂಬತ್ತು ಗರ್ಭಗುಡಿಗಳಿವೆ. ಪುರಾತತ್ವ ಮತ್ತು ಪ್ರವಾಸೋಧ್ಯಮ ಇಲಾಖೆ ಗಮನಹರಿಸಿ ದೇವಸ್ಥಾನವನ್ನು ಅಭಿವೃದ್ಧಿಪಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
* *
ದೇವಸ್ಥಾನ ವೀಕ್ಷಿಸಲು ದೇಶ ಹಾಗೂ ವಿದೇಶಿ ಪ್ರವಾಸಿಗಳು ಬರುತ್ತಾರೆ. ದೇವಸ್ಥಾನದಲ್ಲಿ ಮೂಲ ಸೌಕರ್ಯ ಇಲ್ಲದಿರುವುದುರಿಂದ ಅನಾನುಕೂಲವಾಗುತ್ತಿದೆ
ರಾಮಣ್ಣ ಭಜಂತ್ರಿ
ಸ್ಥಳೀಯ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.