ADVERTISEMENT

ಕಾರ್ಮಿಕರ ಬಂಧನ; ಟಿಯುಸಿಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:31 IST
Last Updated 16 ಏಪ್ರಿಲ್ 2017, 9:31 IST

ಕೊಪ್ಪಳ: ನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ತುಂಗಭದ್ರಾ ನೀರಾವರಿ ಕಾರ್ಮಿಕರ ಪಾದಯಾತ್ರೆ ತಡೆದು, ಕಾರ್ಮಿಕರನ್ನು ತುಮಕೂರಲ್ಲಿ ಬಂಧಿಸಿದ್ದನ್ನು ವಿರೋಧಿಸಿ ಟ್ರೇಡ್‌ ಯೂನಿಯನ್ ಸೆಂಟರ್ ಆಫ್‍ ಇಂಡಿಯಾದ ಜಿಲ್ಲಾ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.  

ಮಾರ್ಚ್‌ 17ರಿಂದ ತುಂಗಭದ್ರಾ ಯೋಜನೆಯ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ನೀರಾವರಿ ಹಂಗಾಮಿ ಸಾವಿರಾರು ಕಾರ್ಮಿಕರು ಮುನಿ ರಾಬಾದ್‌ ಪ್ರಧಾನ ಕಚೇರಿ ಎದುರು- ವೇತನ ಹೆಚ್ಚಳಕ್ಕಾಗಿ ಸಮಾನ ಕೆಲಸದಲ್ಲಿ ಸಮಾನ ವೇತನಕ್ಕಾಗಿ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದರು.

ಯಾರೂ ಸ್ಪಂದಿಸದಾಗ ಅನಿವಾರ್ಯವಾಗಿ ಮುನಿರಾಬಾದ್‌ನಿಂದ ರಾಷ್ಟ್ರೀಯ ಹೆದ್ದಾರಿ 50ರ ಮೂಲಕ ಬೆಂಗಳೂರಿಗೆ 330 ಕಿ.ಮೀ. ಕಾಲ್ನಡಿಗೆ ಜಾಥಾದ ಮೂಲಕ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಕಾರ್ಮಿಕರು ಹೋಗುತ್ತಿದ್ದರು. ತುಮಕೂರು ಸಮೀಪ ತಮ್ಮ ಸಂಘಟನೆಯ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಮತ್ತು ಇತರರನ್ನು ನಿಯೋಗದಲ್ಲಿ ಕರೆದುಕೊಂಡು ಹೋಗಿ ಮುಖ್ಯಮಂತ್ರಿಯನ್ನು ಭೆೇಟಿ ಮಾಡಿಸಲಾಗುವುದು ಎಂದು ತಂತ್ರ ರೂಪಿಸಿದ ಪೊಲೀಸರು ಕಾರ್ಮಿಕರನ್ನು ಬಂಧಿಸಿದ್ದಾರೆ.

ADVERTISEMENT

ಇದು ಸರಿಯಲ್ಲ. ಕೂಡಲೇ ಕಾರ್ಮಿಕರನ್ನು ಬಿಡುಗಡೆಗೊಳಿಸಿ,  ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ಎಲ್ಲಾ ಕ್ರಿಮಿನಲ್ ಪ್ರಕರಣ ವಾಪಸ್ ಪಡೆದು, ಪ್ರಕರಣದ ಮೇಲೆ ನ್ಯಾಯಾಂಗ ತನಿಖೆ ನಡೆಸುಬೇಕು ಎಂದು ಪ್ರತಿಭಟನಾನಿರತ ಕಾರ್ಯಕರ್ತರು ಹೇಳಿದರು.

ಪಿಯುಸಿಎಲ್‌ ರಾಜ್ಯ ಉಪಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಎಐಟಿಯುಸಿ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ್, ಟಿಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ,  ಮುಖಂಡರಾದ ಭೀಮಸೇನ ಕಲಕೇರಿ, ನಾಗರಾಜ ಪೂಜಾರ್, ಮೂಕಪ್ಪ ಎನ್. ಮೇಸ್ತ್ರಿ, ದೇವೇಂದ್ರಪ್ಪ ದೊಡ್ಡಮನಿ, ರಮೇಶ ಕಾಮನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.