ADVERTISEMENT

ಗಂಗಾವತಿ ಚಲೋ, ಅಘೋಷಿತ ಬಂದ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:00 IST
Last Updated 19 ಸೆಪ್ಟೆಂಬರ್ 2017, 6:00 IST

ಕನಕಗಿರಿ: ನವಲಿ ರೈಸ್‌ಟೆಕ್‌ ಪಾರ್ಕ್‌ ಹಾಗೂ ನವಲಿ ಹೋಬಳಿ ಪ್ರದೇಶವನ್ನು ನಿಯೋಜಿತ ಕನಕಗಿರಿ ತಾಲ್ಲೂಕಿಗೆ ಸೇರಿಸುವಂತೆ ಒತ್ತಾಯಿಸಿ ಸೋಮವಾರ ನಡೆದ ಗಂಗಾವತಿ ಚಲೋ ಪ್ರತಿಭಟನೆ ನಿಮಿತ್ತ ಪಟ್ಟಣದ ವರ್ತಕರು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು

ಎಪಿಎಂಸಿ ದಲಾಲಿ ಅಂಗಡಿ, ಕಿರಾಣಿ ಅಂಗಡಿ, ಎಪಿಎಂಸಿ ಚಿಕ್ಕ ಮಳಿಗೆ, ಎಗ್‌ ರೈಸ್‌ ಮಾರಾಟಗಾರರ ಸಂಘ, ರಸಗೊಬ್ಬರ ಮಾರಾಟಗಾರರು ಸೇರಿದಂತೆ ವಿವಿಧ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದ್ದರು. ಬಜಾರ ಹಮಾಲರ ಸಂಘ ಮತ್ತು ಕನಕಾಚಲಪತಿ ಗಂಜ್ ಹಮಾಲರ ಸಂಘದವರು ಕೆಲಸ ಸ್ಥಗಿತಗೊಳಿಸಿ ಹೋರಾಟದಲ್ಲಿ ಭಾಗವಹಿಸಿದ್ದರು.

ನವಲಿ ಜನತೆ ಭಾಗಿ: ನವಲಿಯನ್ನು ನಿಯೋಜಿತ ಕನಕಗಿರಿ ತಾಲ್ಲೂಕಿಗೆ ಸೇರಿಸುವಂತೆ ಒತ್ತಾಯಿಸಿ ಕನಕಗಿರಿ ತಾಲ್ಲೂಕು ಕ್ರಿಯಾ ಸಮಿತಿ ಕರೆ ನೀಡಿದ್ದ ಗಂಗಾವತಿ ಬಂದ್ ಚಳುವಳಿಗೆ ನವಲಿ ಜನಪ್ರತಿನಿಧಿಗಳು, ಗ್ರಾಮಸ್ಥರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ADVERTISEMENT

ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಹುತೇಕ ಮುಖಂಡರು ಮಾತನಾಡಿ, ಒಣ ಬೇಸಾಯ ಪ್ರದೇಶಕ್ಕೆ ನವಲಿ ಸೇರಿಸುವಂತೆ ಅವರು ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಗೌರಮ್ಮ ಜಡಿಯಪ್ಪ ಮಕ್ಕುಂದಿ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಮರೇಶ ಮುಂಡರಗಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ಸಂಕನಾಳ, ಸದಸ್ಯರಾದ ರಾಮಾನಾಯ್ಕ್, ವೀರೇಶ ಭಜಂತ್ರಿ, ಬೀರಪ್ಪ ಬಂಕದಮನಿ, ಯಂಕಪ್ಪ ದೇವರಗುಡಿ, ದುರಗಪ್ಪ ಭೋವಿ, ಬೀರಪ್ಪ ಉದ್ಯಾಳ, ಮಾಜಿ ಅಧ್ಯಕ್ಷ ಪ್ಯಾಟೆಪ್ಪ ನಾಯಕ, ಪ್ರಮುಖರಾದ ಹುಸೇನಪೀರ ಕನಕಗಿರಿ, ಮಂಜುನಾಥ, ವೀರೇಶ ನವಲಿ, ಲಿಂಗಪ್ಪ, ಹಿರೇಭೋಗಪ್ಪ, ಜಡಿಯಪ್ಪ ಸಂಕನಾಳ ಸೇರಿದಂತೆ ಆದಾಪುರ, ಸಂಕನಾಳ, ಈಚನಾಳ, ಉದ್ಯಾಳ, ಕ್ಯಾರಿಹಾಳ, ನವಲಿ, ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.