ADVERTISEMENT

ನೌಕರರು ಪ್ರಾಮಾಣಿಕ ಕೆಲಸ ಮಾಡಿ

ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್‌ ಘಾಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 5:57 IST
Last Updated 20 ಫೆಬ್ರುವರಿ 2017, 5:57 IST

ಕೊಪ್ಪಳ: ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಿ, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್‌ ಘಾಳಿ ಹೇಳಿದರು.

ನಗರದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ನಡೆದ ನೌಕರರ ಪತ್ತಿನ ಸಹಕಾರ ಸಂಘ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಮಾತನಾಡಿ, 3 ತಿಂಗಳಲ್ಲಿ 362 ಸರ್ಕಾರಿ ನೌಕರರು ಸಹಕಾರಿ ಸಂಘದಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದರು.

ಸಂಘ ಆರ್ಥಿಕವಾಗಿ ಸಧೃಡವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನೌಕರರು ಮನರಂಜನೆ ಉದ್ದೇಶಕ್ಕಾಗಿ ಹಾಸ್ಯ, ಸಂಗೀತದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದೈನಂದಿನ ಬದುಕಿನ ಒತ್ತಡವನ್ನು ಮರೆಯಬೇಕು ಎಂದರು.

ಸಂಘದ ಅಧ್ಯಕ್ಷ ನಾಗರಾಜ್‌ ಆರ್‌. ಜುಮ್ಮನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಚಿಂತನೆಗಳಿಂದ ಸಂಘಗಳನ್ನು ಹುಟ್ಟುಹಾಕಲಾಗಿದೆ. ಕುಟುಂಬ ನಿರ್ವಹಣೆಗೆ ನೌಕರರು ಸಾಲ ಮಾಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನೌಕರರ ಹಿತದೃಷ್ಟಿಯಿಂದ ಸಂಘ ಅಸ್ತಿತ್ವಕ್ಕೆ ಬಂದಿದೆ ಎಂದರು.

ಸಂಘದ ಸಂಘಟನಾ ಶಕ್ತಿಯಿಂದ ಸರ್ಕಾರ ನಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಿದೆ. ನೌಕರರು ರಾಜ್ಯಾದ್ಯಂತ ನಡೆಸಿದ ಸಾಮೂಹಿಕ ಪ್ರತಿಭಟನೆಯಿಂದ 6ನೇ ವೇತನ ಆಯೋಗ ಶಿಫಾರಸು ಮಾಡಿರುವುದು ನಮ್ಮ ಸಂಘಟನಾ ಶಕ್ತಿಗೆ ಉತ್ತಮ ಉದಾಹರಣೆ. ಅಧಿಕಾರ ಶಾಶ್ವತವಲ್ಲ, ಸಂಘಟನೆ ಶಾಶ್ವತ ಎಂದು ಅವರು ಹೇಳಿದರು.

ಸಹಕಾರಿ ಸಂಘಗಳ ಉಪನಿಬಂಧಕ ಗುರುಮೂರ್ತಿಸ್ವಾಮಿ, ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪ ನಿರ್ದೇಶಕ ಬಸವರಾಜ್‌ ಪಾಟೀಲ್‌ ಕೊಂಕಲ್‌, ಜಿಲ್ಲಾ ವಾರ್ತಾಧಿಕಾರಿ ತುಕಾರಾಮರಾವ್‌, ಸಿಪಿಐ ರುದ್ರೇಶ್‌ ಉಜ್ಜನಕೊಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ವ್ಹಿ.ಜಡಿಯವರ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಬಸವರಾಜ ಆಕಳವಾಡಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕ ಅಧ್ಯಕ್ಷ ಮಾರ್ತಾಂಡರಾವ್‌ ದೇಸಾಯಿ, ನೌಕರರ ವಿವಿಧ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ ರಾದ ಕೆ. ಪ್ರಸನ್ನಾಚಾರ, ರಾಮಣ್ಣ ಬಾರಕೇರ, ವಿಶ್ವನಾಥ, ಟಿ.ಅಮರದೀಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.