ಕನಕಗಿರಿ: ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಲಾಗುವುದು ಎಂದು ಶಾಸಕ ಶಿವರಾಜ ತಂಗಡಗಿ ತಿಳಿಸಿದರು. ಸಮೀಪದ ಹುಲಿಹೈದರ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿಯ ವಸತಿ ನಿಲಯಕ್ಕೆ ಈಚೆಗೆ ಭೇಟಿ ನೀಡಿ ಅವರು ಮಾತನಾಡಿದರು.
ಆರೋಗ್ಯ ಕೇಂದ್ರ ಮಂಜೂರು ಬಹು ವರ್ಷಗಳ ಬೇಡಿಕೆಯಾಗಿದ್ದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ನೀಡಿ ವಿವಿಧೆಡೆ ಪಿಎಚ್ಸಿ ಕೇಂದ್ರ ನೀಡಲು ಮನವಿ ಮಾಡಿಕೊಳ್ಳಲಾಗುವುದು.
ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದ್ದು ಶೀಘ್ರವೇ ಭೂಮಿ ಪೂಜೆ ನೆರವೇರಿಸಲಾಗುವುದು. ಈಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ ಗರುಡಪ್ಪ ನಾಯಕ ಅವರು ನನ್ನ ಬೆಂಬಲಿಗರಾಗಿದ್ದು, ಅವರ ಮೂರು ಮಕ್ಕಳ ಹೆಸರಿನಲ್ಲಿ ಶೈಕ್ಷಣಿಕ ನೆರವಿಗಾಗಿ ಬ್ಯಾಂಕ್ನಲ್ಲಿ ನಿಶ್ಚಿತ ಠೇವಣೆ ಹಣ ಇಡಲಾಗುವುದು ಎಂದರು.
ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ತಂಗಡಗಿ ಅವರಿಗೆ ಅಲ್ಲಿನ ವಿದ್ಯಾರ್ಥಿಗಳ ಸಮಸ್ಯೆ ಪ್ರಮುಖರಾದ ರಮೇಶ ನಾಯಕ, ಗೋಸ್ಲೆಪ್ಪ ಗದ್ದಿ ಅವರು ಸಮಸ್ಯೆಗಳ ಕುರಿತು ವಿವರಿಸಿದರು. ಕುರುಬ ಸಮಾಜದ ಜಿಲ್ಲಾ ಮಾಜಿ ಅಧ್ಯಕ್ಷ ಸಿದ್ದಪ್ಪ ಎನ್, ತಾಲ್ಲೂಕು ಪಂಚಾಯಿತಿ ಸದಸ್ಯ ಕನಕಪ್ಪ ತಳವಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ನಾಯಕ, ಸದಸ್ಯರಾದ ಶಿವಜಾತಪ್ಪ ಗದ್ದಿ, ಪರಸಪ್ಪ ಜಾಡಿ, ಪರಶುರಾಮ ತಳವಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.