ADVERTISEMENT

ಬಕ್ರೀದ್‌ಗೆ ಮುಸ್ಲಿಂರಿಂದ ಪ್ರತ್ಯೇಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 7:06 IST
Last Updated 30 ಆಗಸ್ಟ್ 2017, 7:06 IST
ಕಾರಟಗಿಯಲ್ಲಿ ಸೋಮವಾರ ನಡೆದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ಅನ್ನಪೂರ್ಣಮ್ಮ ಬೂದಿ ಚಾಲನೆ ನೀಡಿದರು
ಕಾರಟಗಿಯಲ್ಲಿ ಸೋಮವಾರ ನಡೆದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ಅನ್ನಪೂರ್ಣಮ್ಮ ಬೂದಿ ಚಾಲನೆ ನೀಡಿದರು   

ಗಂಗಾವತಿ: ‘ಕೆಲ ರಾಜಕಾರಣಿಗಳು ವೈಯಕ್ತಿಕ ಹಿತಾಸಕ್ತಿಗೆ ಮುಸಲ್ಮಾನರಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಂಸದ ಎಚ್.ಜಿ. ರಾಮುಲು ನಿವಾಸದ ಹಿಂಬದಿ ವಿಶಾಲ ಮೈದಾನದಲ್ಲಿ ಈ ಬಾರಿ ಬಕ್ರೀದ್‌ ಹಬ್ಬಕ್ಕೆ ಮುಸಲ್ಮಾನರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸುತ್ತೇವೆ’ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಸಹೋದರ ಅಜರ್ ಅನ್ಸಾರಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿರುವ ಎಲ್ಲಾ ಮುಸಲ್ಮಾನರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಹಬ್ಬ ಆಚರಿಸುವ ಉದ್ದೇಶದಿಂದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದೆವು.

ಆದರೆ ನಗರದಲ್ಲಿ ಕೆಲ ರಾಜಕಾರಣಿಗಳು ಮುಸಲ್ಮಾನರಲ್ಲೇ ಒಡಕನ್ನುಂಟು ಮಾಡುವ ಮೂಲಕ ಧರ್ಮ ವಿರೋಧಿ ಕೃತ್ಯ ಅನುಸರಿಸುತ್ತಿದ್ದಾರೆ. ಅದಕ್ಕಾಗಿ ನಗರದ ಬಹುತೇಕ ಮುಸಲ್ಮಾನರು ಸೆ. 2ರಂದು ನಡೆಯುವ ಬಕ್ರೀದ್ ಹಬ್ಬಕ್ಕೆ ಪ್ರತ್ಯೇಕ ಪ್ರಾರ್ಥನೆ ಸಲ್ಲಿಸುತ್ತೇವೆ’ ಎಂದರು.

ADVERTISEMENT

‘ಈ ಬಗ್ಗೆ ಈಗಾಗಲೇ ನಗರದಲ್ಲಿ ಕರಪತ್ರ ಹಂಚಲಾಗಿದೆ. ಮೈಕ್ ಮೂಲಕವೂ ಜನರಿಗೆ ಸಂದೇಶ ತಲುಪಿದೆ. ಸೆ. 2ರ ಬೆಳಗ್ಗೆ 9ಕ್ಕೆ ಬಯಾನ್ (ಹಬ್ಬದ ಉದ್ದೇಶದ ಬಗ್ಗೆ ಉಪನ್ಯಾಸ, ಮಂತ್ರ ಪಠಣ) ನಡೆಯಲಿದೆ. ಬಳಿಕ 10ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದರು.

‘ಸರ್ಕಾರಿ ಖಾಜಿ ಮೀರ್‌ಅಲಿ ಇಬ್ರಾಹಿಂ ನೇತೃತ್ವದಲ್ಲಿ ಈ ಬಾರಿ ಎಲ್ಲರೂ ಪ್ರಾರ್ಥನೆ ಸಲ್ಲಿಸುತ್ತೇವೆ. ಗೌರಿ-ಗಣೇಶ ಹಾಗೂ ಬಕ್ರೀದ್ ಹಬ್ಬಗಳು ನಾಡಿಗೆ ಒಳಿತನ್ನುಂಟು ಮಾಡಲಿ. ಮಳೆ, ಬೆಳೆ ಸಮೃದ್ಧವಾಗಲಿ ಎಂದು ಪ್ರಾರ್ಥಿಸುತ್ತೇವೆ’ ಎಂದು ನಗರಸಭೆಯ ಮಾಜಿ ಸದಸ್ಯ ಎಂ.ಡಿ.ಉಸ್ಮಾನ್ ಹೇಳಿದರು.

ಶಾಸಕ ಇಕ್ಬಾಲ್ ಅನ್ಸಾರಿ ಅವರ ಇನ್ನೊಬ್ಬ ಸಹೋದರ ಅಮ್ಜಾದ್ ಅನ್ಸಾರಿ, ಮುಸ್ಲಿಂ ಸಮಾಜದ ಮುಖಂಡರಾದ ಎಂ.ಡಿ.ಅಲಿ, ಸೈಯ್ಯದ್ ನಾಜೀಂ, ಬಿ.ಆರ್.ಗೌಸ್, ಎಂ.ಡಿ. ಯಸೂಫ್, ನಾಸೀರ್ ಆಹ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.